ಪುಟಗಳು

Monday, May 30, 2016

ಮೀಸಲಾತಿ ಏಕೆ? ಮತ್ತು ಹೇಗೆ ಪ್ರಸ್ತುತ

ಮೀಸಲಾತಿಯನ್ನು ವಿರೋಧಿಸುವವರು ದೇಶಕ್ಕೆ ಅಪಾಯಕಾರಿ ಎನ್ನವವರು ಇದನ್ನು ಓದಿಕೊಳ್ಳಬೇಕು.

   ಆ  ಶಾಲೆಯ ಸಮಾಜಶಾಸ್ತ್ರದ ಶಿಕ್ಷಕ ತುಂಬ ಬುದ್ಧಿವಂತ. ಅವನು ಕಲಿಸುವ ವಿಧಾನಗಳೇ ವಿಚಿತ್ರವಾಗಿದ್ದವು. ಆದರೆ ಅವನ ಪ್ರತಿಯೊಂದು ಪ್ರಯೋಗವೂ ಮಕ್ಕಳ ಮನಸ್ಸಿನಲ್ಲಿ ಧೃಡವಾಗಿ ನಿಲ್ಲುತ್ತಿದ್ದವು. ಒಂದು ಬಾರಿ ಆತ ಸಾಮಾಜಿಕ ನ್ಯಾಯದ ಬಗ್ಗೆ ಪಾಠ ಮಾಡುತ್ತಿದ್ದ.  ತರಗತಿಯ ಮಕ್ಕಳು ತಮ­ತಮಗೆ ತಿಳಿದಂತೆ ವಾದ ಮಾಡುತ್ತಿದ್ದರು. ಆಗ ಆತ ಒಂದು ಪ್ರಯೋಗ ಮಾಡು-ವು-ದಾಗಿ ಘೋಷಿ-ಸಿದ. ಮಕ್ಕಳೆಲ್ಲ ಉತ್ಸಾಹದಿಂದ ಕುಳಿತರು. ಶಿಕ್ಷಕ ಗ್ರಂಥಾಲಯದಿಂದ ಹಳೆಯ ಪತ್ರಿಕೆ­ಗಳನ್ನು ತರಿಸಿದ. ಎಲ್ಲ ಮಕ್ಕಳಿಗೂ ಒಂದೊಂದು ಪುಟವನ್ನು ಹರಿದು ಕೊಟ್ಟ.

ಪ್ರತಿಯೊಬ್ಬ ವಿದ್ಯಾರ್ಥಿಯೂ ಆ ಹಳೆಯ ಕಾಗದವನ್ನು ಹಿಸುಕಿ ಚೆಂಡಿನಂತೆ ಮುದ್ದೆ ಮಾಡಲು ಹೇಳಿದ. ಅವರೆಲ್ಲ ಹಾಗೆಯೇ ಮಾಡಿದರು. ನಂತರ ಆತ ಕೊಠಡಿಯ ಮೂಲೆ­ಯಲ್ಲಿದ್ದ ಕಸದ ಬುಟ್ಟಿಯನ್ನು ತಂದು ಕಪ್ಪು ಹಲಗೆಯ ಮುಂದಿದ್ದ ಮೇಜಿನ ಮೇಲಿಟ್ಟ. ಮಕ್ಕಳು ಅವನ ಚಟುವಟಿಕೆ­ಯನ್ನು ಗಮನಿಸು-ತ್ತಿದ್ದರು. ಆಮೇಲೆ ಆತ ಹೇಳಿದ, ‘ಮಕ್ಕಳೇ, ನಿಮಗೆ ಈಗೊಂದು ಸ್ಪರ್ಧೆ. ನೀವು ಈಗ ಎಲ್ಲಿ ಕುಳಿತಿದ್ದೀರೋ ಅಲ್ಲಿಂದಲೇ ನಿಮ್ಮ ಕೈಯಲ್ಲಿದ್ದ ಕಾಗದದ ಮುದ್ದೆ-ಯನ್ನು ಈ ಕಸದ ಬುಟ್ಟಿಯಲ್ಲಿ ಎಸೆಯಬೇಕು. ನೀವು ಎಸೆದದ್ದು ಬುಟ್ಟಿಯ ಒಳಗೇ ಬೀಳಬೇಕು. ಹೊರಗೆ ಬಿದ್ದರೆ ಅಂಕವಿಲ್ಲ. ಚೆನ್ನಾಗಿ  ಗುರಿಯಿಟ್ಟು ಎಸೆಯಿರಿ’.

ಮುಂದಿನ ಸಾಲಿನ ಮಕ್ಕಳು ‘ಹೋ’ ಎಂದು ಸಂಭ್ರಮಿಸಿದರೆ ಹಿಂದಿನ ಸಾಲಿನ ಮಕ್ಕಳು, ‘ಸಾರ್, ಇದು ಅನ್ಯಾಯ. ನಮಗೆ ಬುಟ್ಟಿ ಬಲು ದೂರ.ಅದಲ್ಲದೇ ನಡುವೆ ಇಷ್ಟು ಸಾಲು ಸ್ನೇಹಿತರು ಕುಳಿತಿದ್ದಾರಲ್ಲ. ಅವರನ್ನೆಲ್ಲ ದಾಟಿ ನಮ್ಮ ಕಾಗದ ಬುಟ್ಟಿ ತಲುಪುವುದು ಹೇಗೆ ಸಾಧ್ಯ?’ ಎಂದು ತಕರಾರು ಮಾಡಿ-ದರು. ಆದರೆ ಶಿಕ್ಷಕ ಅದಾವುದನ್ನು ಕೇಳಿಸಿಕೊಳ್ಳದೇ ಕಾಗದದ ಉಂಡೆ-ಗಳನ್ನು ಎಸೆಯಲು ಅಪ್ಪಣೆ ಮಾಡಿದ. ಮಕ್ಕಳೆಲ್ಲ ಉತ್ಸಾಹದಿಂದ ಗುರಿ­ಯಿಟ್ಟು ಎಸೆ-ಯಲು ಪ್ರಯತ್ನಿ­ಸಿದರು. ಮುಂದಿನ ಸಾಲಿನ ಬಹುತೇಕ ಮಕ್ಕಳು ಬುಟ್ಟಿ-ಯಲ್ಲೇ ಉಂಡೆಯನ್ನು ಹಾಕಿ­ದರು. ಅವರಲ್ಲಿಯೂ ಕೆಲವರಿಂದ ಸಾಧ್ಯ-ವಾಗ-ಲಿಲ್ಲ, ಎರಡನೆಯ ಸಾಲಿನ ಕೆಲವು ಮಕ್ಕಳೂ ಯಶಸ್ವಿಯಾದರು.  ಹಿಂದಿನ, ಅದರ ಹಿಂದಿನ ಸಾಲಿನ ಮಕ್ಕಳು ಮಾತ್ರ ನಿರಾಸೆಪಟ್ಟರು. ಎಲ್ಲೋ ಒಂದಿಬ್ಬರ ಕಾಗದದ ಉಂಡೆ­ಗಳು ಮಾತ್ರ ಬುಟ್ಟಿಯನ್ನು ಸೇರಿದವು.

‘ಈ ಪ್ರಯೋಗದ ನಂತರ ನಿಮಗೆ ಏನು ಅರ್ಥವಾಯಿತು?’ ಎಂದು ಶಿಕ್ಷಕ ಕೇಳಿದ. ಒಬ್ಬ ಹುಡುಗಿ ಹೇಳಿದಳು, ‘ಸರ್, ಇದು ಸರಿಯಾದ ಪ್ರಯೋಗ­ವಲ್ಲ. ಎಲ್ಲರಿಗೂ ಒಂದೇ ನಿಯಮ ವಿರಬೇಕಲ್ಲವೇ? ಎಲ್ಲರಿಗೂ ಸಮಾನ ಅವಕಾಶ ಇರಬೇಕಿತ್ತಲ್ಲ?. ಮುಂದಿ­ದ್ದವರಿಗೆ ಇದು ಅನುಕೂಲವಾಗಿತ್ತು. ಹಿಂದೆ ಇದ್ದವರ ಗತಿ ಏನು ಸರ್? ಎಲ್ಲರೂ ಒಂದೇ ದೂರದಲ್ಲಿ ನಿಂತಿದ್ದರೆ ಅವರ ನಿಜವಾದ ಗುರಿ ಪರೀಕ್ಷೆಯಾ­ಗುತ್ತಿತ್ತು’. ಶಿಕ್ಷಕ ಭಾವಪೂರಿತನಾಗಿ ಹೇಳಿದ, ‘ಮಕ್ಕಳೇ ನನ್ನ ಇಂದಿನ ಪಾಠ ಇದೇ.  ನಮ್ಮ ಸಮಾಜದಲ್ಲಿ ಹೀಗೆ ಆಗಿದೆ. ಕೆಲವರು ಶತಶತಮಾನಗಳಿಂದ ಮುಂದಿನ ಸಾಲು ಹಿಡಿದು ಕುಳಿತಿದ್ದಾರೆ.

ಅವರಿಗೆ ಗುರಿ ಕಣ್ಣಮುಂದೆ ಕಾಣುತ್ತಿದೆ, ಮತ್ತು ಹತ್ತಿರವೂ ಇದೆ. ಅವರಿಗೆ ಗುರಿ ತಲುಪುವುದು ಸುಲಭ ಹಾಗೂ ಸಾಧ್ಯ. ಆದರೆ ಹಿಂದೆ, ಹಿಂದಿನ ಸಾಲಿನಲ್ಲಿ ಶತಮಾನಗಳಿಂದ ಉಳಿದೇ ಬಿಟ್ಟವರಿಗೆ ಗುರಿ ಕಾಣದಿರುವುದು ಮಾತ್ರವಲ್ಲ, ಗುರಿ ಇದೆ ಎನ್ನುವುದೂ ತಿಳಿದಿಲ್ಲ. ಎಲ್ಲರೂ ಗುರಿ ತಲುಪಬೇಕು ಎನ್ನುವ ಆಶಯವೇ ಸಮಾನತೆಯ ಸ್ಪರ್ಧೆ ಅಲ್ಲವೇ? ನೀವು ಈಗ ಶಿಕ್ಷಣ ಪಡೆದ ಮಕ್ಕಳು. ಸಮಾಜದ ಮುಂದಿನ ಸಾಲಿನಲ್ಲಿ ಕುಳಿತು-ಕೊಳ್ಳು-ತ್ತೀರಿ. ನಿಮಗೆ ಬದುಕಿನ ಗುರಿ ಕಾಣುತ್ತದೆ, ತಲುಪು­ವುದು ಸುಲಭವೆನ್ನಿಸುತ್ತದೆ. ಈಗ ನೀವು ದಯವಿಟ್ಟು ಹಿಂದಿನ ಸಾಲಿನಲ್ಲಿರುವ, ಶಿಕ್ಷಣ ಪಡೆಯದ, ಅವಕಾಶ-ಗಳಿಂದ ವಂಚಿತರಾದ ಜನರ ಬಗ್ಗೆ ಯೋಚಿಸ­ಬೇಕು. ಅವರನ್ನು ಮುಂದಿನ ಸಾಲಿಗೆ ತರುವ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಸಮಾ­ನರ ನಡುವೆ ಸ್ಪರ್ಧೆ ಸಾಧ್ಯ. ಈ ಸಮಾ­ನತೆಯನ್ನು ತರುವ ಪ್ರಯತ್ನ ನಿಮ್ಮ­ದಾಗಬೇಕು.  ಆಗಲೇ ಶಿಕ್ಷಣ ಪಡೆದದ್ದು ಸಾರ್ಥಕವಾಗುತ್ತದೆ’. ಶಿಕ್ಷಕನ ಮಾತು ಮತ್ತು ಪ್ರಯೋಗ ಮಕ್ಕಳ ಹೃದಯ ತಟ್ಟಿತು. ಸಮಾನತೆಯ ಬಗ್ಗೆ ಭಾಷಣ ಮಾಡುವುದು ಸುಲಭ. ಆದರೆ ಶಿಕ್ಷಣ, ಅವಕಾಶಗಳನ್ನು ಪಡೆದ ಜನ ಅದರಿಂದ ವಂಚಿತ-ರಾದವರಿಗೆ ಸಹಾಯ ಮಾಡುವ ನಿಜವಾದ, ಪ್ರಾಮಾಣಿಕ ಪ್ರಯತ್ನ ಮಾಡಿ-ದಾಗ ಮಾತ್ರ ಅವರು ಸಮಾಜದ ಋಣವನ್ನು ಸ್ವಲ್ಪವಾದರೂ ತೀರಿಸಿ­ದಂತಾಗುತ್ತದೆ. ಹಾಗೆ ಇಲ್ಲದೇ ಸ್ವಾರ್ಥಿ­ಗಳಾದರೆ ಸ್ವಾಮಿ ವಿವೇಕಾ­ನಂದರು ಹೇಳಿದಂತೆ, ‘ಅವ­ರಂಥ ದೇಶದ್ರೋಹಿ­ಗಳು ಮತ್ತಾರೂ ಇರಲಾರರು’.

ಸ್ನೇಹಿತರೇ  ಸಮಾಜದಲ್ಲಿ ಬದುಕುತ್ತಿದ್ದೇವೆ.ಸ್ವಲ್ಪವಾದರೂ ಸಮಾಜದ ಋಣ ತೀರಿಸಲು ಬದ್ಧರಾಗೋಣ.ಸಧೃಡ      ದೇಶ ಕಟ್ಟುವ ಕಾಯಕದಲ್ಲಿ  ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ ಏನಂತೀರಿ.
ಬಡವರು ತಿಂದರೆ
ಭಗವಂತ ತಿಂದಹಾಗೆ:~

(ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ)


ಒಬ್ಬ ಶ್ರೀಮಂತ ತನ್ನ ತೋಟದಲ್ಲಿ ಬೆಳೆದಿದ್ದ ಒಂದು ಬಾಳೆಯ ಗೊನೆಯನ್ನು ತನ್ನ ತೋಟದಲ್ಲಿ ಕೆಲಸ ಮಾಡುವವನ ಕೈಯಲ್ಲಿ ಕೊಟ್ಟು  ಇದನ್ನು ದೇವಸ್ಥಾನದಲ್ಲಿ ಕೊಟ್ಟು ಬಾ ಎಂದು ಹೇಳಿ ಕಳಿಸಿದನು.

ಆ ಕೆಲಸದವ ಹಸಿವಾಗಿ ಎರಡು ಹಣ್ಣನ್ನ ಬರುವ ದಾರಿಯಲ್ಲಿ ತಿಂದು ಬಿಡುತ್ತಾನೆ ಮಿಕ್ಕಿದ್ದನ್ನ ದೇವಸ್ಥಾನದಲ್ಲಿ ಕೊಟ್ಟು ಮನೆಗೆ ಹಿಂತಿರುಗುತ್ತಾನೆ.

ಅಂದು ರಾತ್ರಿ ದೇವರು ಆ ಶ್ರೀಮಂತನ ಕನಸಲ್ಲಿ ಬಂದು ನೀನು ಕಳುಹಿಸಿದ ಎರಡು ಹಣ್ಣನ್ನ ನಾನು ತಿಂದೆ ತುಂಬಾ ಚೆನ್ನಾಗಿತ್ತು ಎಂದು ಹೇಳಿ ಆ ದೇವರು ಮರೆಯಾಗಿ ಬಿಟ್ಟರು.

ದೇವರ ಮಾತು ಕೇಳಿ ಆ ಶ್ರೀಮಂತ ಕೋಪ ಗೊಂಡ.ನಾನು ಒಂದು ಗೊನೆ ಹಣ್ಣನ್ನೆಲ್ಲವ ದೇವರಿಗೆ ಕಳುಹಿಸಿದ್ದು,
ಮತ್ತೆ ದೇವರು ಯಾಕೆ ಎರಡು ಹಣ್ಣನ್ನ ಮಾತ್ರ ತಿಂದೆ ಎಂದರು ಎಂದು.

ಕೋಪದಲ್ಲಿ ಆ ಕೆಲಸದವನನ್ನ ವಿಚಾರಿಸಿದರು ಆಗ ಕೆಲಸದವನು ವಿವರಿಸಿದ ದಾರಿಯಲ್ಲಿ ಹಸಿವಾಗಿ ಎರಡು ಹಣ್ಣನ್ನು ನಾನೇ ತಿಂದಿದ್ದು  ಬುದ್ದಿ
ನನ್ನನ್ನ ಕ್ಷಮಿಸಿ ಎಂದು ಕೇಳಿಕೊಂಡನು.

ಆಗ ಆ ಶ್ರೀಮಂತನಿಗೆ ಅರ್ಥವಾಯಿತು ಕೆಲಸದವನು ತಿಂದ ಎರಡು ಹಣ್ಣು ಮಾತ್ರ ದೇವರಿಗೆ ಹೋಗಿ ಸೇರಿದೆ ಎಂದು. ಅಂದು ಒಂದು ವಿಷಯ ಅರ್ಥವಾಯಿತು ಆ ಶ್ರೀಮಂತನಿಗೆ

ಒಬ್ಬ ಬಡವ ತಿಂದರೆ ಭಗವಂತ ತಿಂದಹಾಗೆ ಎಂದು.

Tuesday, May 03, 2016

ಜೂನ್1ರೊಳಗೆ ಡಿಡಿಪಿಐ, ಬಿಇಒ ವರ್ಗಾವಣೆ ಪೂರ್ಣ 
3 May,    

ಬೆಂಗಳೂರು: ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
(PSGadyal teacher Vijayapur)

‘ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಹಾಗೂ ಪಿಯು ಉಪನ್ಯಾಸಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಹಿರಿತನದ ಮೇಲೆ ಕೌನ್ಸೆಲಿಂಗ್‌ ನಡೆಸಲಾಗುವುದು’ ಎಂದು ಅವರು ಸೋಮವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆಯಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಮತ್ತು ಉಪನಿರ್ದೇಶಕರು (ಡಿಡಿಪಿಐ) ತಮ್ಮ ಮೂಲ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಬಾರದು ಎಂದಿದೆ. ಆದ ಕಾರಣ ಜೂನ್1ರೊಳಗೆ ಇವರ ವರ್ಗಾವಣೆ ಪೂರ್ಣಗೊಳಿಸಲಾಗುವುದು’ ಎಂದರು.

ಪತಿ ಮತ್ತು ಪತ್ನಿ ಇಬ್ಬರೂ ಶಿಕ್ಷಕರಾಗಿದ್ದಲ್ಲಿ ಒಂದೇ ಕಡೆ ಅವಕಾಶ ನೀಡುವಂತಹ ಕೋರಿಕೆ ವರ್ಗಾವಣೆಗೆ ಕಾಯ್ದೆಯಲ್ಲಿ ಕಳೆದ ವರ್ಷ ಕೆಲ ತಿದ್ದುಪಡಿ ಮಾಡಲಾಗಿತ್ತು. ಆದರೆ, ಇದರಿಂದ ಕೇವಲ ಶೇ50ರಷ್ಟು ಶಿಕ್ಷಕರಿಗೆ ಸಹಕಾರಿಯಾಗಿದೆ. ಹೆಚ್ಚಿನ ಶಿಕ್ಷಕರಿಗೆ ಅನುಕೂಲವಾಗಲು ಈ ಬಾರಿ ಕೆಲ ತಿದ್ದುಪಡಿತರುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.

ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆ ಶೇ 70ರಷ್ಟು ಪೂರ್ಣಗೊಂಡಿದೆ. ಜೂನ್ 1ರೊಳಗೆ ಉಳಿದ ಶಾಲೆಗಳಿಗೂ ಸರಬರಾಜು ಮಾಡಲಾಗುವುದು. ಕಳೆದ ವರ್ಷ ಶೂ ಪೂರೈಕೆ ಮಾಡಿದವರಿಗೆ ಹಣ ನೀಡುವಲ್ಲಿ ಕೆಲವೆಡೆ ವಿಳಂಬ ಆಗಿದೆ. ಸರಬರಾಜುದಾರರ ಕೋಡಿಂಗ್‌ನಲ್ಲಿ ಗೊಂದಲ  ಇದಕ್ಕೆ ಕಾರಣ. ಒಂದು ವಾರದಲ ಸಮಸ್ಯೆ ಸರಿಪಡಿಸಲಾಗುವುದು ಎಂದರು.

‘ಪಿಯು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಗಾಗಿ ಕುಮಾರನಾಯಕ್ ವರದಿ ಅನ್ವಯ ಒಂದು ವೇತನ ಬಡ್ತಿ ನೀಡುವುದಾಗಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಜೂನ್ 1ರಿಂದ ಇದು ಅನ್ವಯ ಆಗುತ್ತದೆ. ಪ್ರತಿಭಟನೆ ನಡೆಸುತ್ತಿದ್ದ ಉಪನ್ಯಾಸಕರು ಆವೇಶದಲ್ಲಿ ವೇತನ ಬಡ್ತಿ ವಾಪಸ್‌ ನೀಡುವುದಾಗಿ ಹೇಳಿಕೆ ನೀಡಿರಬಹುದು. ಅವರ ಮನವೊಲಿಸುತ್ತೇವೆ’ ಎಂದು ಹೇಳಿದರು.

●ಸರ್ಕಾರಿ ಶಾಲೆ ಮುಚ್ಚುವುದಿಲ್ಲ:

ವಿದ್ಯಾರ್ಥಿಗಳಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಒಂದು ವೇಳೆ ವಿದ್ಯಾರ್ಥಿಗಳೇ ಇಲ್ಲದಿದ್ದರೆ ತಾತ್ಕಾಲಿಕವಾಗಿ ಅದನ್ನು ನಿಲ್ಲಿಸಿ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ನಿಯೋಜಿಸಲಾಗಿರುತ್ತದೆ. ಒಬ್ಬ ವಿದ್ಯಾರ್ಥಿ ಬಂದರೂ ಆ ಶಾಲೆಯನ್ನು ಮರಳಿ ಪ್ರಾರಂಭಿಸಲಾಗುವುದು ಎಂದರು.

●ಮೌಲ್ಯಮಾಪನ ಪೂರ್ಣ

ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಈಗಾಗಲೇ ಪೂರ್ಣ ಗೊಂಡಿದ್ದು ಅವುಗಳ ಡಿ ಕೋಡಿಂಗ್‌ ಕಾರ್ಯ ನಡೆಯುತ್ತಿದೆ ಎಂದು ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ದ್ವಿತೀಯ ಪಿಯು ಫಲಿತಾಂಶವನ್ನು ಸಿಇಟಿ ಫಲಿತಾಂಶಕ್ಕೆ ನೀಡುವುದಾಗಿ ಪುನರುಚ್ಚರಿಸಿದರು
●ಒಬ್ಬ ವಿದ್ಯಾರ್ಥಿ ಇದ್ದರೂ ಸರ್ಕಾರಿ ಶಾಲೆ ಮುಚ್ಚಲ್ಲ :
ಸಚಿವ ಕಿಮ್ಮನೆ ರತ್ನಾಕರ.

●ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟಣೆ ನಂತರ ಶಿಕ್ಷಕರ ವರ್ಗಾವಣೆಗೆ ಚಾಲನೆ.

ಬೆಂಗಳೂರು, ಮೇ 2-ರಾಜ್ಯದ ಯಾವುದೇ ಸರ್ಕಾರಿ ಶಾಲೆಯಲ್ಲಿ ಕನಿಷ್ಠ ಒಬ್ಬ  ವಿದ್ಯಾರ್ಥಿ ಇದ್ದರೂ ಆ ಶಾಲೆಯನ್ನು ಮುಚ್ಚುವುದಿಲ್ಲ. ಒಂದು ವೇಳೆ ಒಬ್ಬ ವಿದ್ಯಾರ್ಥಿಯೂ ಇಲ್ಲದಿದ್ದರೆ ಅಂತಹ ಶಾಲೆಗೆ ಬೀಗ ಹಾಕುತ್ತೇವೆ ಆದರೆ ಆ ಶಾಲೆಯ ಅಸ್ತಿತ್ವ ರದ್ದಾಗುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸ್ಪಷ್ಟಪಡಿಸಿದ್ದಾರೆ.  
(PSGadyal Teacher Vijayapur)

ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಒಂದು ವೇಳೆ ಯಾವುದೇ ವಿದ್ಯಾರ್ಥಿ ದಾಖಲಾಗದೆ ಹೋದರೆ ಶಾಲೆಗೆ ಬೀಗ ಹಾಕುತ್ತೇವೆಯೇ ಹೊರತು, ಅದರ ಅಸ್ತಿತ್ವ ರದ್ದಾಗಿರುವುದಿಲ್ಲ.  ಒಬ್ಬ ವಿದ್ಯಾರ್ಥಿ ದಾಖಲಾದರೂ ಶಾಲೆಯನ್ನು  ಮತ್ತೆ ಆರಂಭಿಸಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳಿಲ್ಲದ ಶಾಲೆಯ ಶಿಕ್ಷಕರನ್ನು ಬೇರೆ ಕಡೆ ನಿಯೋಜಿಸಿರುತ್ತೇವೆ. ಮತ್ತೆ ಇಲ್ಲಿ ವಿದ್ಯಾರ್ಥಿಗಳು ದಾಖಲಾದಾಗ ಅಲ್ಲಿಗೂ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಹೇಳಿದರು.  ರಾಜ್ಯದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕೆಂಬ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಲಾಗುತ್ತಿದೆ. ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡುವ ಸಂಬಂಧ ಪ್ರಧಾನಿಗೆ ಮನವಿ ಮಾಡಲಾಗಿದೆ ಎಂದ ಅವರು, ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಶಾಲೆಗೆ ವಿದ್ಯಾರ್ಥಿಗಳು ಬರುತ್ತಿಲ್ಲ ಎಂಬುದಕ್ಕೆ ಬೇರೆ ಬೇರೆ ಕಾರಣಗಳಿವೆ. ಜನನ ಪ್ರಮಾಣ ಕಡಿಮೆ, ಸರ್ಕಾರವೇ ಹಣ ಕೊಟ್ಟು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುತ್ತಿರುವ ಆರ್ಟಿಇ ಕಾಯ್ದೆಯಂತಹ ಕ್ರಮಗಳಿಂದಲೂ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ ಎಂದು  ವಿವರಿಸಿದರು. ಆರ್ಟಿಇ ಕಾಯ್ದೆ ದುರುಪಯೋಗವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಪೋಷಕರಿಗೆ ಗುರುತಿನ ಚೀಟಿ ಕಡ್ಡಾಯಗೊಳಿಸುವ ಮೂಲಕ ದುರುಪಯೋಗ ತಡೆಗಟ್ಟಲು  ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.  ಆರ್ಟಿಇಗೆ ಒಳಪಡುವ ವಿದ್ಯಾರ್ಥಿಗಳ ಕುಟುಂಬ ಬಿಪಿಎಲ್ ಕಾರ್ಡ್ ಇರಬೇಕೆಂಬ ನಿಯಮ ಜಾರಿಗೆ ತರಬೇಕೆಂಬ ವಿಷಯ ಚರ್ಚೆಯಲ್ಲಿದೆ. ಸದ್ಯಕ್ಕೆ ಅದು ಸಾಧ್ಯವಾಗುವುದಿಲ್ಲ. ಮುಂದಿನ ವರ್ಷದಿಂದ ಇದು ಜಾರಿಯಾಗಲಿದೆ. ಒಂದನೆ ತರಗತಿಯಿಂದ ಪಿಯುಸಿವರೆಗೆ 17 ಸಾವಿರ ಶಿಕ್ಷಕರನ್ನು ನೇಮಕ ಮಾಡುವ ಪ್ರಸ್ತಾವನೆ ಆರ್ಥಿಕ ಇಲಾಖೆ ಮುಂದಿದೆ. ಅದಕ್ಕೆ ಯಾವುದೇ ಅನುಮತಿ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

●●18ರೊಳಗೆ ಪಿಯು ಫಲಿತಾಂಶ:

ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡು ಈ ತಿಂಗಳ 18ರೊಳಗೆ ಫಲಿತಾಂಶ ಹೊರಬೀಳಲಿದ್ದು, ಎಸ್ಎಸ್ಎಲ್ಸಿ ಫಲಿತಾಂಶ ತಿಂಗಳಾಂತ್ಯದಲ್ಲಿ ಬರಲಿದೆ. ಸಿಇಟಿ ಫಲಿತಾಂಶ ಹೊರಬೀಳುವ ಮುನ್ನವೇ ಪಿಯುಸಿ ಫಲಿತಾಂಶ ನೀಡಲಾಗುವುದು. ಮೇ ಮೊದಲ ವಾರದಲ್ಲೇ ಫಲಿತಾಂಶ ನೀಡಲು ಸರ್ಕಾರ ಆಲೋಚಿಸಿತ್ತು. ಆದರೆ ರಸಾಯನಶಾಸ್ತ್ರ ಪತ್ರಿಕೆ ಸೋರಿಕೆ ಮತ್ತಿತರ ಕಾರಣಗಳಿಂದ ವಿಳಂಬವಾಗಿದ್ದು,  ಈಗ ಯಾವುದೇ ತೊಂದರೆ ಇಲ್ಲದೆ ಫಲಿತಾಂಶ ಹೊರಬೀಳಲಿದೆ. ಸಿಇಟಿ ರ್ಯಾಂ ಕ್ ಹಾಗೂ ಇನ್ನಿತರ ಯಾವುದಕ್ಕೂ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.

●●ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟಣೆ ನಂತರ ಶಿಕ್ಷಕರ ವರ್ಗಾವಣೆಗೆ ಚಾಲನೆ ದೊರೆಯಲಿದೆ.

 ಈ ಬಾರಿಯೂ ನಿಯಮಾವಳಿಗಳಂತೆ ವರ್ಗಾವಣೆ ನಡೆಸಲಾಗುವುದು ಎಂದ ಅವರು, ಡಿಡಿಪಿಐ, ಬಿಇಒಗಳು ತಮ್ಮ ತವರೂರಲ್ಲಿ ಕೆಲಸ ಮಾಡುವ ಹಾಗಿಲ್ಲ. ಪತಿ-ಪತ್ನಿ ಶಿಕ್ಷಕರು ವರ್ಗಾವಣೆ ಕೋರಿರುವ 17 ಸಾವಿರ ಪ್ರಕರಣಗಳಿವೆ ಎಂದು ಹೇಳಿದರು. ಹೀಗಿರುವ ವರ್ಗಾವಣೆ ನಿಯಮಾವಳಿಗಳ ಬದಲಾವಣೆ ಅಗತ್ಯವಿದ್ದು, ಯಾವ ರೀತಿ ಬದಲಾವಣೆ ತರಬೇಕೆಂಬ ಬಗ್ಗೆ ಚರ್ಚೆ ನಡೆಸಲಾಗುವುದು.

ಪಿಯುಸಿ ಉಪನ್ಯಾಸಕರು ಇಂಕ್ರಿಮೆಂಟ್ ಬೇಡ ಎಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಾವು ಒಂದು ಇಂಕ್ರಿಮೆಂಟ್ ಇನ್ನು ಕೊಟ್ಟಿಲ್ಲ. ಬೇಡ ಎನ್ನುವ ಪ್ರಶ್ನೆ ಬರುವುದಿಲ್ಲ. ಪ್ರತಿಭಟನೆ ನಡೆಸುವಾಗ ಆವೇಶ ಇರುತ್ತದೆ. ಈಗಿನ ಪರಿಸ್ಥಿತಿಯೇ ಬೇರೆ. ಕುಮಾರ್ನಾಯಕ್ ವರದಿಯ ಬಹುಪಾಲನ್ನು ನಾವು ಅನುಷ್ಠಾನಕ್ಕೆ ತರುತ್ತೇವೆ ಎಂದರು.  ಅವರು ಕೇಳಿದ ನಾಲ್ಕು ಇಂಕ್ರಿಮೆಂಟ್ಗಳಲ್ಲಿ ಒಂದು ಇಂಕ್ರಿಮೆಂಟ್ ನೀಡಲು ಸಮ್ಮತಿಸಿದ್ದೇವೆ. ಇದರಿಂದ ಪ್ರಾಂಶುಪಾಲರೊಬ್ಬರಿಗೆ ನೀಡುವ ವೇತನದಲ್ಲಿ  ಹೆಚ್ಚುವರಿಯಾಗಿ 92 ಸಾವಿರ ರೂ. ಆಗಲಿದೆ.  42 ಸಾವಿರದಿಂದ 53 ಸಾವಿರಕ್ಕೆ ವೇತನ ಹೆಚ್ಚಳವಾಗಲಿದೆ. ಪ್ರಸ್ತುತ ಇರುವ 32 ಸಾವಿರದಿಂದ 37 ಸಾವಿರ ರೂ.ಗಳಿಗೆ ಅದರಂತೆ ಉಪನ್ಯಾಸಕರಿಗೆ 20 ರಿಂದ 25 ಸಾವಿರ ರೂ.ಗೆ ಒಂದು ಇಂಕ್ರಿಮೆಂಟ್ ನೀಡುವುದರಿಂದ ವೇತನ ಹೆಚ್ಚಳವಾಗಲಿದೆ.

ಪ್ರೌಢಶಾಲಾ ಶಿಕ್ಷಕರಿಗೆ 8900 ರಿಂದ 20,000 ರೂ.ಗೆ ಹೆಚ್ಚಳವಾಗಲಿದೆ ಈ ಇಂಕ್ರಿಮೆಂಟ್ಗಳು ಜೂ.1 ರಿಂದ ಅನ್ವಯವಾಗಲಿದೆ ಎಂದು ತಿಳಿಸಿದರು. ಅಂಗನವಾಡಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಆರಂಭಿಸುವ ಬಗ್ಗೆ ಕೇಂದ್ರಕ್ಕೆ ಈಗಾಗಲೇ ನಾಲ್ಕೈದು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದು ಜಾರಿಗೆ ಬಂದಿಲ್ಲ. ಅಂಗನವಾಡಿ ಶಿಕ್ಷಕಿಯರಿಗೆ ತರಬೇತಿ ನೀಡಿ ಇರುವ ಶೇ.50ರಷ್ಟು ಸೌಲಭ್ಯವನ್ನು ಬಳಸಿಕೊಂಡು ಎಲ್ಕೆಜಿ ಹಾಗೂ ಯುಕೆಜಿ ಆರಂಭಿಸಲು ಚಿಂತನೆ ನಡೆಸಲಾಗಿದೆ
ಕೆಎಸ್ಓಯು ವಿಚಾರ:~

ಪ್ರಧಾನಿಗೆ ಪತ್ರ ಬರೆದ ಮಂಡ್ಯದ ವಿದ್ಯಾರ್ಥಿನಿಗೆ ಬಂತು ಪ್ರತಿಕ್ರಿಯೆ. 03 May

ಮಂಡ್ಯ: ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ (ಕೆಎಸ್ ಒಯು)ದ ಮಾನ್ಯತೆ ರದ್ದು ವಿಚಾರ ಕುರಿತು ಮಂಡ್ಯದ ವಿದ್ಯಾರ್ಥಿನಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಅದಕ್ಕೆ ಪ್ರಧಾನ ಮಂತ್ರಿ ಕಚೇರಿಯಿಂದ ಪ್ರತಿಕ್ರಿಯೆಯೂ ಬಂದಿದೆ.

ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಎಲ್ಲಾ ಕೋರ್ಸ್ ಗಳ ಮಾನ್ಯತೆ ರದ್ದುಗೊಳಿಸಿರುವುದರಿಂದ ನಮಗೆ ತೊಂದರೆ ಎದುರಾಗಿದ್ದು, ಇದನ್ನು ಸರಿಪಡಿಸಿ ಎಂದು ಮಂಡ್ಯದ ಶಂಕರನಗರದ ನಿವಾಸಿ 22 ವರ್ಷದ ಮೇರಿ ಮೆಟಿಲ್ಡಾ ಗೊವಿಯಾಸ್ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಳು.

ಕೆಎಸ್ಓಯುನಲ್ಲಿ ನಾನು ಬಿಕಾಂ ವ್ಯಾಸಂಗ ಮಾಡುತ್ತಿದ್ದೇನೆ. ಯುಜಿಸಿ ಕೆಎಸ್ ಒಯುನ ಮಾನ್ಯತೆ ರದ್ದುಗೊಳಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಗಳಾಗಿವೆ. ಕೆಎಸ್ಒಯುನಲ್ಲಿ ಪದವಿ ಹೊಂದಿದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿಲ್ಲ. ಅಷ್ಟೇ ಅಲ್ಲದೇ, ಉನ್ನತ ಮಟ್ಟದ ವ್ಯಾಸಂಗಕ್ಕೂ ಇದರ ಪದವಿಯನ್ನು ಪರಿಗಣಿಸುತ್ತಿಲ್ಲ. ಇನ್ನು ಖಾಸಗಿ ಸಂಸ್ಥೆಗಳು ಕೆಎಸ್ ಓನಲ್ಲಿ ಪದವಿ ಪಡೆದಿದ್ದಾರೆಂದು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಾಗಾಗಿ ತಾವೇ ಖುದ್ದಾಗಿ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಳು.

ವಿದ್ಯಾರ್ಥಿನಿಯ ಪತ್ರಕ್ಕೆ ಪ್ರಧಾನ ಮಂತ್ರಿ ಕಚೇರಿಯಿಂದ ಏಪ್ರಿಲ್ 29ರಂದು ಪ್ರತಿಕ್ರಿಯೆ ಬಂದಿದ್ದು, ಈ ಪತ್ರವನ್ನು ಸಂಬಂಧಪಟ್ಟ ಸಚಿವಾಲಯಕ್ಕೆ ಕಳುಹಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ದೂರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯುಜಿಸಿಯ ನಿಯಮಗಳನ್ನು ಕೆಎಸ್ಒಯು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ 2012-2013ರ ನಂತರದ ಮುಕ್ತ ವಿಶ್ವವಿದ್ಯಾಲಯದ ಎಲ್ಲಾ ಕೋರ್ಸ್ ಗಳ ಮಾನ್ಯತೆಗಳನ್ನು ಯುಜಿಸಿ ರದ್ದುಗೊಳಿಸಿತ್ತು.