ಪುಟಗಳು

Tuesday, January 31, 2017

ದ. ರಾ. ಬೇಂದ್ರೆ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಅಂಬಿಕಾತನಯದತ್ತ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿರುವ ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರು 31ನೆ ಜನವರಿ 1896ರಂದು ಧಾರವಾಡದ ಪೋತನೀಸರ ಓಣಿಯಲ್ಲಿರುವ ಗುಣಾರಿಯವರ ಮನೆಯಲ್ಲಿ ಹುಟ್ಟಿದರು.  ಅವರ ತಂದೆ ರಾಮಚಂದ್ರ ಪಂತರು.  ತಾಯಿ ಅಂಬೂ ತಾಯಿ.  ತಂದೆಯವರು ತೀರಿಕೊಂಡ ಮೇಲೆ ತನ್ನ ಇನ್ನೊಬ್ಬ ಚಿಕ್ಕಪ್ಪ ಬಂಡೋಪಂತರ ಆಶ್ರಯದಲ್ಲಿ ಬೇಂದ್ರೆಯವರ ಬಡಕುಟುಂಬ ಆಸರೆ ಪಡೆಯಿತು.  ಚಿಕ್ಕಪ್ಪನ ಆಶ್ರಯದಲ್ಲಿಯೇ ಬಿ.ಎ. ವರೆಗಿನ ಅಭ್ಯಾಸ, ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ನಡೆಯಿತು.

ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಮೂರು ವರ್ಷ, ಮುಂದೆ ರಾಷ್ಟ್ರೀಯ ಶಾಲೆಯಲ್ಲಿ ಉದ್ಯೋಗ, ತಮ್ಮ 28ನೆಯ ವಯಸ್ಸಿನಲ್ಲಿ ಮಾತೃವಿಯೋಗ, ಮಧ್ಯೆ ಸೊಂಡೂರು ಸಂಸ್ಥಾನದಲ್ಲೂ ಸ್ವಲ್ಪಕಾಲದ ನೌಕರಿ.  ಒಂದು ವರ್ಷ ಅಲೆದಾಟ, 1925ರಿಂದ 1932ರವರೆಗೆ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ವಿವಿಧ ಕ್ಷೇತ್ರಗಳ ದುಡಿಮೆ.  ನರಬಲಿ ಕವನದ ಕಾರಣವಾಗಿ 3 ತಿಂಗಳು ಹಿಂಡಲಗಿ ಕಾರಾಗೃಹ ವಾಸ ಶಿಕ್ಷೆ.  ಮತ್ತೆ ಅಲೆದಾಟ, 1935ರಿಂದ 1940ರವರೆಗೆ 5 ವರ್ಷಗಳ ಕಾಲ ನಿರುದ್ಯೋಗ.  ಅನಂತರ ಅಣ್ಣ ಮಾಸ್ತಿ ಅವರ ಬೆಂಬಲದಿಂದ ‘ಜೀವನ’ ಪತ್ರಿಕೆಯ ಸಂಪಾದಕನೆಂಬ ಗೌರವ ವೃತ್ತಿ.  ಒಂದು ವರ್ಷ ಗದಗಿನ ಚೌಹಾನ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ.  ಮತ್ತೆ ಒಂದು ವರ್ಷ ಹುಬ್ಬಳ್ಳಿಯ ಇಂಗ್ಲಿಷ್ ಸ್ಕೂಲಿನಲ್ಲಿ ಅಲ್ಪಾವಧಿ ವೃತ್ತಿ.  1942-43ರಲ್ಲಿ ಪೂನಾದ ಕಾಮರ್ಸ್ ಕಾಲೇಜಿನಲ್ಲಿ ಅರ್ಧಕಾಲಿಕ ಕನ್ನಡ ಅಧ್ಯಾಪಕ ವೃತ್ತಿ.  ಅನಂತರ 1944ರಲ್ಲಿ ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ವೃತ್ತಿ.  ಸುಮಾರು 12ವರ್ಷಗಳ ಕಾಲ ಆ ಹುದ್ದೆಯಲ್ಲೇ ಇದ್ದ ಇವರಿಗೆ 60 ಆಯಿತೆಂದು ಅಲ್ಲಿ ನಿವೃತ್ತಿಯಾಯಿತು.  1956ರಲ್ಲಿ ಆಕಾಶವಾಣಿಯಲ್ಲಿ ಮೊದಲು ಪ್ರೊಡ್ಯೂಸರ್ ಆಗಿ, ಆಮೇಲೆ ಸಲಹೆಗಾರರಾಗಿ ಧಾರವಾಡದಲ್ಲಿ ಮತ್ತೆ ಒಂದು ಉದ್ಯೋಗ.  ಸರ್ಕಾರಕ್ಕೆ ಆಕಾಶವಾಣಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಪಿ.ಎಂ. ಲಾಡ್ ಅವರ ಮೂಲಕ ದೊರೆತ ಉದ್ಯೋಗ ಅದು.  ಇಡೀ ಬದುಕಿನ ತುಂಬಾ ಉದ್ಯೋಗ ನಿರುದ್ಯೋಗಗಳ ಚೆಲ್ಲಾಟ.  ಈ ಮಧ್ಯೆಯೂ ಧೃತಿಗೆಡದ ಕವಿಚೇತನ ಬೇಂದ್ರೆಯವರದು.

ಬೇಂದ್ರೆಯವರ ವಿವಾಹವಾದದ್ದು 1919ರಲ್ಲಿ, ಹುಬ್ಬಳ್ಳಿಯಲ್ಲಿ.  ನರಗುಂದದಲ್ಲಿ ಸಾರ್ವಜನಿಕ ಸೇವಾ ಇಲಾಖೆಯಲ್ಲಿ ನೌಕರರಾಗಿದ್ದ ಶ್ರೀ ಜೋಗಳೇಕರ ವಾಸುದೇವರಾಯರ ಮಗಳಾದ ರಂಗೂತಾಯಿಯೇ ಇವರ ಮಡದಿ.  ಬೇಂದ್ರೆ ಮನೆತನಕ್ಕೆ ಬಂದ ಮೇಲೆ ಅವರ ಹೆಸರು ಲಕ್ಷ್ಮೀಬಾಯಿ.  ಲಕ್ಷ್ಮೀಬಾಯಿ ಹಾಗೂ ಬೇಂದ್ರೆಯವರ ಸಂಸಾರ ಕಂಡದ್ದು ಹೆಚ್ಚಾಗಿ ಕಷ್ಟದ ದಿನಗಳು.  ಅದರಲ್ಲಿಯೂ ಹುಟ್ಟಿದ 9 ಮಕ್ಕಳಲ್ಲಿ 6 ಮಕ್ಕಳು ಕಣ್ಣ ಮುಂದೆಯೇ ಇಲ್ಲವಾಗಿ ಉಳಿದವರು 2 ಗಂಡು ಮಕ್ಕಳು (ವಾಮನ ಬೇಂದ್ರೆ ಮತ್ತು ಪಾಂಡುರಂಗ ಬೇಂದ್ರೆ) ಮತ್ತು ಒಬ್ಬಳು ಮಗಳು ಶ್ರೀಮತಿ ಮಂಗಳ.  ಬಡತನದ ಕುಲುಮೆಯಲ್ಲಿ ಬೇಯುತ್ತಿದ್ದಂತೆಯೇ ಕರುಳ ಕುಡಿಗಳು ಕಣ್ಣಮುಂದೆ ಬಾಡಿಹೋದಾಗ ಆ ದುಃಖದ ಅನುಭವವನ್ನೂ ಎದೆಯಲ್ಲಿ ತುಂಬಿಕೊಂಡವರು ಅವರು.

ಇಷ್ಟಾದರೂ ಬೇಂದ್ರೆಯವರ ದೃಷ್ಟಿ ‘ಬಡತನ ಸಿರಿತನ ಕಡೇತನಕ ಉಳಿದಾವೇನ’ ಎಂಬುದು.  ಅಲ್ಲದೆ ಅವರ ಕಾವ್ಯದ ಮೂಲದೃಷ್ಟಿ – ಎನ್ನಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ – ಎಂಬ ರಸಯೋಗಿಯ ಸಂಕಲ್ಪದಿಂದ ಪ್ರಚೋದಿತವಾದದ್ದು.  ರಸವೆ ಜನನ ವಿರಸ ಮರಣ ಸಮರಸವೇ ಜೀವನ ಎಂದು ಬದುಕನ್ನು ಎದೆಗಪ್ಪಿಕೊಂಡು ಅರಳಿದ ಕಾವ್ಯಚೇತನ ಅವರದ್ದು.

ಬೇಂದ್ರೆ ಅಥವಾ ‘ಬೇನ್’ರೆ  ಅಂದರೆ ದೇವಾಲಯಗಳಲ್ಲಿ ಋಕ್ ಮಂತ್ರಗಳನ್ನು ಪಠಿಸುವವರು ಎಂಬ ಅರ್ಥ ಇದೆಯಂತೆ.  ಇವರ ಮೂಲ ವಂಶಜರು ಮಹಾರಾಷ್ಟ್ರದ ರತ್ನಗಿರಿಯಿಂದ ಬಂದು ಕರ್ನಾಟಕದ ಶಿರಹಟ್ಟಿಯಲ್ಲಿ ನೆಲೆಸಿದರು.  ಇವರ ಮುತ್ತಜ್ಜ ರಾಮಭಟ್ಟ ಎಂಬುವರು ಕೊನೆಗೆ ಸಂನ್ಯಾಸ ದೀಕ್ಷೆ ಪಡೆದು ಸಮಾಧಿಸ್ತರಾದರೆ, ಬೇಂದ್ರೆಯವರ ಅಜ್ಜ ಅಪ್ಪಾಭಟ್ಟ ತಪಃಶಕ್ತಿಯ ಜೊತೆಗೆ ಕಾವ್ಯಶಕ್ತಿಯನ್ನೂ ಪಡೆದಿದ್ದರಂತೆ.  ಇವರು ಸತ್ಯನಾರಾಯಣ ಕಥೆಯನ್ನು ರಚಿಸಿದ್ದರೆಂದು ಹೇಳುತ್ತಾರೆ.

ಬೇಂದ್ರೆಯವರ ಬದುಕಿನಲ್ಲಿ ಪ್ರಭಾವ ಬೀರಿದ ವ್ಯಕ್ತಿಗಳ ಹೆಸರುಗಳನ್ನು ಹೇಳುವುದು ಅಷ್ಟು ಸುಲಭದ ಮಾತಲ್ಲ.  ಅಂಬೂ ತಾಯಿಯೇ ಅವರ ಬದುಕಿನ ಮೊದಲ ಪ್ರೇರಕ ಶಕ್ತಿ.  ಅವರ ಸಂಕೇತವಾಗಿಯೇ ತಮ್ಮ ಕಾವ್ಯನಾಮವನ್ನು ಅಂಬಿಕಾತನಯದತ್ತ ಎಂದು ಮಾಡಿಕೊಂಡರು.  ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯ ಕವಿ ಹುಯಿಲಗೋಳ ನಾರಾಯಣರಾಯರು ಇವರ ಶಿಕ್ಷಕ ವರ್ಗದಲ್ಲಿ ಒಬ್ಬರಾಗಿದ್ದರು.  ಇನ್ನೊಬ್ಬ ಮಹತ್ವದ ವ್ಯಕ್ತಿಯೆಂದರೆ ಪುಣೆಯ ಫರ್ಗೂಸನ್ ಕಾಲೇಜಿನ ಆಂಗ್ಲಭಾಷೆಯ ಪ್ರಾಧ್ಯಾಪಕರಾದ ಪಟವರ್ಧನ ಅವರು.  ಬಾಲ್ಯದುದ್ದಕ್ಕೂ ಆಸರೆಯಾಗಿದ್ದವರು ಅವರ ಕಕ್ಕ ಬಂಡೋಪಂತರು.  ಅಧ್ಯಯನ ಬೇಂದ್ರೆಯವರ ಬದುಕಿನ ಒಂದು ಅವಿಭಾಜ್ಯ ಅಂಗ.  ಸಂಸ್ಕೃತ, ಕನ್ನಡ, ಇಂಗ್ಲಿಷ್ ಹಾಗೂ ಮರಾಠಿ ಸಾಹಿತ್ಯಗಳನ್ನು ಅಧ್ಯಯನ ಮಾಡಿದವರು ಅವರು.  ಎಲ್ಲಕ್ಕಿಂತ ಅತಿ ಮುಖ್ಯವಾದ ವಿಷಯ ಎಂದರೆ ಇವರ ಬದುಕು ಮರಾಠಿ, ಕನ್ನಡ ದ್ವಿಭಾಷಾ ವಾತಾವರಣದಲ್ಲಿದ್ದುದು.  ಕನ್ನಡದಲ್ಲಿ ಇಂಥ ದ್ವಿಭಾಷಾ, ದ್ವಿಸಂಸ್ಕೃತಿಗಳ ವಾತಾವರಣದಲ್ಲಿ ಮಾಸ್ತಿ, ಡಿ.ವಿ.ಜಿ., ಪು.ತಿ.ನ ಅವರೂ ಇದ್ದವರೇ ಎಂದರೂ ಬೇಂದ್ರೆಯವರ ಕಾವ್ಯದಲ್ಲಿ ಮರಾಠಿ, ಕನ್ನಡ ಭಾಷಾ ಸಂಸ್ಕೃತಿಗಳ ಸಂಗಮದ ಫಲಸಮೃದ್ಧಿಯನ್ನು ಕಾಣಬಹುದಾಗಿದೆ.  ಮರಾಠಿಯ ಜ್ಞಾನೇಶ್ವರಿ, ರಾಮಾಯಣ, ಮಹಾಭಾರತ, ಭಾಗವತ, ವಚನಗಳು, ಕೀರ್ತನ ಸಾಹಿತ್ಯ, ತತ್ವಜ್ಞಾನ, ಸಂಖ್ಯಾಶಾಸ್ತ್ರ, ಖಗೋಳಶಾಸ್ತ್ರ, ಜೋತಿಷ್ಯ ಶಾಸ್ತ್ರ, ಕಾವ್ಯಮೀಮಾಂಸೆ, ಅಲಂಕಾರ, ಉಪನಿಷತ್ತು, ಪಾಣಿನಿಯ ವ್ಯಾಕರಣ, ಕನ್ನಡ ಸಾಹಿತ್ಯ-ಹೀಗೆ ಬಹು ಮುಖ್ಯವಾದ ಅಧ್ಯಯನದಿಂದ ಸಮೃದ್ಧಗೊಂಡ ಚೇತನ ಬೇಂದ್ರೆಯವರದು.  ವಿಶ್ವದ ಮಹಾಕವಿಗಳು, ಹಾಗೆಯೇ ಖಲಿಲ್ ಜಿಬ್ರಾನ್, ಜಾರ್ಜ್ ರಸೆಲ್, ಜೆ. ಕೃಷ್ಣಮೂರ್ತಿ, ಅರವಿಂದರು, ಸ್ವಾಮಿ ರಾಮದಾಸ್, ಮಾರಿಸ್ ಮೇಟರ್ಲಿಂಕ್ ಇಂಥ ದಾರ್ಶನಿಕರ ಅನುಭವ ಚಿಂತನ ಸಮುದ್ರಗಳನ್ನು ಕುಡಿದ ಅಗಸ್ತ್ಯ ಇವರು.  ಇಂಗ್ಲಿಷ್, ಕನ್ನಡ ಸಂಸ್ಕೃತ ಮತ್ತು ಮರಾಠಿ ಸಾಹಿತ್ಯಗಳ ಅತ್ಯಂತ ಆತ್ಮೀಯವಾದ ಒಡನಾಟ ಪಡೆದಿದ್ದ ಈ ವ್ಯಕ್ತಿತ್ವದಲ್ಲಿ ಎರಡು ಭಾಷಾ ಸಂಸ್ಕೃತಿಗಳ ಸಂಗಮವಾಗಿದ್ದಂತೆಯೇ ನಗರ ಹಾಗೂ ಜಾನಪದ ಸಂಸ್ಕೃತಿಗಳು ಸಂಗಮಗೊಂಡಿದ್ದವು.

ಅವರ ಮೊದಲನೇ ಕವನ ಸಂಕಲನವಾದ ‘ಗರಿ’ಯಲ್ಲಿ “ಕನ್ನಡದ ಅಶರೀರವಾಣಿಯು ಸಾವಿರ ಬಾಯಿಗಳಿಂದ ತನ್ನ ಕನಸನ್ನು ಕನ್ನಡಿಸುತ್ತಿದೆ.  ಆ ಸಾವಿರ ಬಾಯಿಗಳಲ್ಲಿ ನನ್ನದೊಂದು.  ಅದೇ ನನ್ನ ಧನ್ಯತೆ” ಎಂದು ಸಹೃದಯರಿಗೆ ನಿವೇದಿಸಿಕೊಳ್ಳುವ ಮಾತು ಬೇಂದ್ರೆಯವರ ಪ್ರತಿಭೆಯ ದ್ಯೋತಕವಾಗಿದೆ.  ಹೀಗಾದುದರಿಂದಲೇ ಕನ್ನಡದ ಎಲ್ಲ ಒಳ್ಳೆಯ ಕಾವ್ಯವು ತನ್ನದೇ ಎನ್ನುವ ನಿರ್ಮತ್ಸರದ ಅಭಿಮಾನ ತಾನೇ ತಾನಾಗಿ ಮೂಡಿತು.  ‘ಗೆಳೆಯರ ಬಳಗ’ ಎಂಬ  ವಿ.ಕೃ. ಗೋಕಾಕ, ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ, ರಂ. ಶ್ರೀ ಮುಗಳಿಯಂಥ ಕವಿಗಳ ಬಳಗವನ್ನೇ ಕಟ್ಟಿದರು.  ಆ ಗುಂಪು ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಇತಿಹಾಸದ ಒಂದು ಜೀವಂತ  ಭಾಗವಾಗಿ ಉಳಿದಿದ್ದಷ್ಟೇ ಅಲ್ಲ ಕವಿಗೆ ಕವಿ ಮುನಿವ ಎಂಬ ಗಾದೆಯನ್ನು ಸುಳ್ಳಾಗಿಸಿತು.  ಅದಕ್ಕಿಂತ ಮುಖ್ಯವಾದ ಮಾತು ಎಂದರೆ ಕನ್ನಡದ ತಮ್ಮ ಸಮಕಾಲೀನ ಕವಿಗಳನ್ನು ಕುರಿತ ಅವರ ಧೋರಣೆ.  ಯುಗದ ಕವಿಗೆ, ಜಗದ ಕವಿಗೆ ನಮಸ್ಕಾರ ಎಂದು ಕುವೆಂಪು ಅವರನ್ನು ಅಭಿನಂದಿಸುತ್ತ ಅವರ ಚಿತ್ರಾಂಗದಾ ಕಾವ್ಯವನ್ನು ಕುರಿತು ಹೇಳುವಾಗ ಹಿಂದಿನ ಮಹಾಕಾವ್ಯವನ್ನು ಮೀರಿಸಲಿದೆ ಎಂದು ಅಭಿಮಾನಪಟ್ಟಿದ್ದು ಬೇಂದ್ರೆಯವರ ಮುಕ್ತ ಪ್ರಶಂಸೆಯ ಕವಿಹೃದಯವನ್ನು ಪರಿಚಯಿಸುತ್ತದೆ.  ಬೇಂದ್ರೆಯವರ ಸನಿಹಕ್ಕೆ ಹೋದ ಹೆಚ್ಚು ಕನ್ನಡ ಕವಿಗಳ ಭಾವನೆ ಇದೇ ತೆರನಾದದ್ದಾಗಿದೆ.

ರಸ ಋಷಿ, ಶ್ರೇಷ್ಠ ಕವಿ  ಹೀಗೆ ಬಹುವಿಧವಾಗಿ ರಸಿಕರಿಂದ ಗೌರವಿಸಲ್ಪಟ್ಟ ಬೇಂದ್ರೆಯವರ ಕಾವ್ಯ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ಶ್ರೀಮಂತಗೊಳಿಸಿದೆ.  ಬೆಳಗು, ರಾಗರತಿ, ಶ್ರಾವಣ, ಯುಗಾದಿ, ಸಣ್ಣ ಸೋಮವಾರ, ಹಕ್ಕಿ ಹಾರುತಿದೆ ನೋಡಿದಿರಾ, ಪಾತರಗಿತ್ತಿ ಪಕ್ಕ, ಹೋತದ ಹುಣಸಿ, ಶ್ರಾವಣ ವೈಭವ, ಚಿತ್ತಿಯ ಮಳೆಯ ಸಂಜೆ ಇಂಥ ನಿಸರ್ಗವನ್ನು ಕುರಿತ ಕವಿತೆಗಳಾಗಲಿ; ಮಾಯಾಕಿನ್ನರಿ, ಹುಬ್ಬಳ್ಳಿಯಾಂವಾ, ಮನಸುಖರಾಯನ ಮಗಳು ಇಂತಹ ಮಾಂತ್ರಿಕ ಕವಿತೆಗಳಾಗಲಿ; ಪುಟ್ಟ ವಿಧವೆ, ನರಬಲಿ, ತುತ್ತಿನಚೀಲ, 33 ಕೋಟಿ, ಕನಸಿನೊಳಗೊಂದು ಕನಸು ಇಂಥ ಸಾಮಾಜಿಕ ಕವಿತೆಗಳಾಗಲಿ; ಕೇಳಿರೊಂದು ಸೋಜಿಗದಂಥ ಬದುಕಿನ ಗಹನತೆಯ ಕಡೆಗೆ ಮನಸೆಳೆಯುವ ಕವಿತೆಯಾಗಲಿ; ಗೆಳೆಯ ಶಂಕರದೇವ, ಗುರುದೇವರಂಥ ವ್ಯಕ್ತಿತ್ವಗಳನ್ನು ಕುರಿತು ಬರೆದ ಕವಿತೆಗಳಾಗಲಿ; ಅನಂತ ಪ್ರಣಯ, ಪ್ರೀತಿ ಇಂಥ ಪ್ರೇಮದ ವಿವಿಧ ಮುಖಗಳನ್ನು ಕುರಿತ ಕವಿತೆಗಳಾಗಲಿ ಬೇಂದ್ರೆಯವರ ಕವಿತೆ ತನ್ನ ಸಾಚಾತನದಿಂದ ಮೆರೆಯುತ್ತದೆ.

ಬೇಂದ್ರೆಯವರ ಕಾವ್ಯದ ಮತ್ತೊಂದು ವೈಶಿಷ್ಟ್ಯ ಎಂದರೆ ಬದುಕೇ ಕಾವ್ಯವಾಗುತ್ತ ಹೋಗುವ ಪವಾಡಸದೃಶ ಶಕ್ತಿ.  ನೀ ಹಿಂಗ ನೋಡಬ್ಯಾಡ ನನ್ನ, ನಾನೊಂದು ನೆನೆದರೆ, ಸಖೀಗೀತ, ನಾದ ಲೀಲೆ, ಪಾಡು, ಹೋದ ಬುಧವಾರ – ಇಂಥ ಕವಿತೆಗಳು ಅವರ ಬದುಕಿಗೆ ತೀವ್ರವಾದ ಆಘಾತವುಂಟು ಮಾಡಿದ ಮಗನ ಸಾವು, ಸಂಸಾರದ ವಿರಸ, ತನ್ನ ಬದುಕಿನ ಕಥೆ-ವ್ಯಥೆಗಳು, ಮಡದಿ ತನ್ನನ್ನು ಬಿಟ್ಟು ಹೋದದ್ದು, ಇಂಥ ಘಟನೆಗಳಿಂದ ಮೂಡಿದವುಗಳಾಗಿವೆ.  ಬದುಕೇ ಕಾವ್ಯವಾಗುವ ಸಹಜ ಕವಿ ಹೃದಯವನ್ನು ಇಂಥ ಕಡೆ ಗುರುತಿಸಬಹುದು.  ಬದುಕಿಗೆ ತೀವ್ರವಾಗಿ ಸ್ಪಂದಿಸುವ ಕವಿಚೇತನವಾದದ್ದರಿಂದಲೇ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಪಾತರಗಿತ್ತಿ ಪಕ್ಕಗಳ ವೈಭವಗಳನ್ನು ನವಿಲು ಗರಿಗೆದರಿದಂತೆ ಮೈತೆರೆಯುತ್ತಾ ಹೋಗುತ್ತದೆ.  ಶ್ರಾವಣವಾಗಲಿ, ಧಾರವಾಡದ ಚೆಲುವಾಗಲಿ ಬದುಕಿನ ಕಾವ್ಯ ಅಥವಾ ಸುಂದರ ಮುಖವಾಗಲೀ ಈ ಪ್ರತಿಭೆಗೆ ಸದಾ ಆಹ್ವಾನವಾಗಿರುತ್ತದೆ.  ಕನ್ನಡದಲ್ಲಿ ಬೇಂದ್ರೆಯವರಷ್ಟು ವಿಫುಲವಾಗಿ ಹಾಗೂ ಕಾವ್ಯಮಯವಾಗಿ ಕೌಟುಂಬಿಕ ಗೀತೆಗಳನ್ನು ರಚಿಸಿದ ಕವಿಯನ್ನು ಕಾಣುವುದು ಕಷ್ಟ.  ಗಂಡು ಹೆಣ್ಣಿನ ಪ್ರೀತಿ ಹಾಗೂ ವಿರಸ ವಿಕೋಪಗಳನ್ನು ತುಂಬಾ ಕಾವ್ಯಮಯವಾಗಿಸಿದ ಪ್ರತಿಭೆ ಇವರದ್ದು.

ಬೇಂದ್ರೆಯವರ 27ಕವನ ಸಂಕಲನಗಳು ಪ್ರಕಟವಾಗಿವೆ.  ಈ ಕವನ ಸಂಕಲನಗಳನ್ನು ಅವಲೋಕಿಸಿದಾಗ ಬದುಕನ್ನು ಅದರ ಆಳ, ವಿಸ್ತಾರ ಹಾಗೂ ವೈವಿಧ್ಯದಲ್ಲಿ ಕಂಡಿರಿಸಿದ ಮಹಾ ಪ್ರತಿಭೆಯೊಂದು ನಮಗೆದುರಾಗುತ್ತದೆ.  ವಚನ ಪರಂಪರೆಯಲ್ಲಿ ರಚಿತವಾದ ವಿನೂತನ ಕಾಂತಿಯ ಕರುಳಿನ ವಚನಗಳು, ಮಾಂತ್ರಿಕತೆಯಿಂದ ಕಳಕಳಿಸುವ ಸುನೀತಗಳು ಅಲ್ಲದೆ ಕನ್ನಡದ ಅನುಭಾವ ಪರಂಪರೆಯನ್ನು ಮುಂದುವರೆಸಿರುವುದು ಬೇಂದ್ರೆಯವರ ವೈಶಿಷ್ಟ್ಯವಾಗಿದೆ.  ಬೆಳಗು ರೀತಿಯ ನಿಸರ್ಗ ಗೀತೆಯಿಂದ ಆರಂಭಿಸಿದ ಜೋಗಿ, ಓಂ ಸಚ್ಚಿದಾನಂದ ಇಂಥ ಕವಿತೆಗಳವರೆಗೆ ಇದರ ಹರವಿದೆ.  ಕನ್ನಡದ ಪರಂಪರೆಯನ್ನು ಹಾಡಿ ಕರ್ನಾಟಕದ ಏಕೀಕರಣದ ಸಂಘಟನೆಯನ್ನು ಇವರ ಕಾವ್ಯ ನಡೆಸಿದ ರೀತಿ ಮುಖ್ಯವಾದದ್ದು.  ಮಾನವನನ್ನು ಸದಾ ಕಾಡುವ ಹಸಿವು, ಬಡತನಗಳು ಕೂಡ ಅನ್ನದೇವರು, ಅನ್ನಬ್ರಹ್ಮದ ದೇಗುಲದಲ್ಲಿ ಇಂಥ ಕವಿತೆಗಳಿಗೆ ಕಾರಣವಾಗಿವೆ.  ಬಂಗಾಳದಲ್ಲಿ ನಡೆದ ಮಾರಣ ಹೋಮವನ್ನು ಕುರಿತು ಬರೆದ ‘ನರಬಲಿ’ ಕವಿಯನ್ನು ಅಂದಿನ ಸರ್ಕಾರದ ಕೋಪಕ್ಕೂ ಗುರಿಯಾಗಿಸಿ ಸೆರೆಮನೆಗೆ ತಳ್ಳಿದ್ದು ಐತಿಹಾಸಿಕ ಘಟನೆ.  ಬದುಕಿನ ಬಡತನ, ಕಷ್ಟ-ಕಾರ್ಪಣ್ಯದ ಮಧ್ಯೆಯೂ ನಿಸರ್ಗದ ಹಾಗೂ ಬದುಕಿನ ಸೌಂದರ್ಯವನ್ನು ಬೊಗಸೆ ಬೊಗಸೆಯಾಗಿ ಸವಿದ, ಹಾಗೆಯೇ ಬದುಕಿದ ಧೀಮಂತ ಪ್ರತಿಭೆ ಬೇಂದ್ರೆಯವರದು.  ನಾದದ ನದಿಯೊಳು ಮಿಂದಾಗ ಸೂಜಿ ಹಿಂದ ದಾರದಾಂಗ ಇಂಥ ಅತ್ಯುತ್ತಮವಾದ ಅನೇಕ ಕಾವ್ಯಪಂಕ್ತಿಗಳನ್ನು ಬೇಂದ್ರೆಯವರ ಕಾವ್ಯದ ತುಂಬಾ ಕಾಣಬಹುದು.  ಅದಕ್ಕೆ ಕಾರಣ ಈ ಪ್ರತಿಭೆ ವಿಶೇಷವಾಗಿ ರೂಪಕಗಳ ಮೂಲಕವೇ ಕ್ರಿಯಾತ್ಮಕವಾಗತೊಡಗುವುದು.  ಉದಾಹರಣೆಗೆ ಅತ್ಯಂತ ಸರಳ ಎಂಬಂತೆ ಕಾಣುವ ಬಡವ ಬಡವಿ ಕವನವನ್ನೇ ನೋಡಬಹುದು.

ಜೋಗಿಯಂಥ ಹೆಚ್ಚು ಸಂಕೀರ್ಣವೂ, ಕಿಂಚಿದ್ ಸ್ಪಷ್ಟವೂ ಹಾಗೂ ಅಧ್ಯಾತ್ಮಿಕವೂ ಆದ ಕವಿತೆಯನ್ನು ಬಿಟ್ಟು ಇಡೀ ಸಂಜೆಯೇ ಒಬ್ಬ ಸುಂದರ ಪ್ರಣಯಿನಿಯಾಗಿ ಎದ್ದು ಮೂಡಿಬರುವಂತೆ ಚಿತ್ರಿತವಾಗಿರುವ ಮಾಂತ್ರಿಕವಾದ, ರಾಗರತಿಯಂಥ ಕವಿತೆಯನ್ನು ಬಿಟ್ಟು ಸರಳವೂ, ಸಹಜವೂ ಆದರೆ ಬೇಂದ್ರೆಯವರ ಕಾವ್ಯ ಪಡೆಯುವ ಸಾರ್ಥಕ್ಯದ ರೀತಿಯನ್ನು ವ್ಯಂಜಿಸುವಂಥದ್ದು ಆಗಿದೆ ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಎಂದು ಸುಂದರವಾಗಿ ಮೂಡುವ’ ಬಡವ ಬಡವಿ ಕವನ.  ಬೇಂದ್ರೆಯವರು ಅನೇಕ  ಕವಿತೆಗಳನ್ನು ಅನುವಾದಿಸಿದ್ದಾರೆ.  ಅವುಗಳಲ್ಲಿ ನಮ್ಮ ಕೊನೆಯ ಶರಣು ಹಾಗೂ ಮೇಘದೂತ ಕವಿತೆಗಳು ಅನುವಾದಗಳು.  ಅರವಿಂದರ ಸಾವಿತ್ರಿಯನ್ನು ಮತ್ತೆ ಕೆಲವು ಕವಿತೆಗಳನ್ನು ಬೇಂದ್ರೆಯವರು ಅನುವಾದಿಸಿದ್ದಾರೆ.  ಅದರಲ್ಲಿ ಬಂಗಾರದ ಹುಡುಗನಂಥ ಕವಿತೆಗಳು ಸ್ವತಂತ್ರ ಕವನವೆಂಬಂತೆ ಗಮನಾರ್ಹವಾಗಿವೆ.

ಭಾಷಣ ಹಾಗೂ ಕಾವ್ಯವಾಚನದಲ್ಲಂತೂ ಬೇಂದ್ರೆಯವರದು ಅಸದೃಶವಾದ ಸೃಜನಶೀಲ ಪ್ರತಿಭೆ.  ನಾವು ಓದುವ ಕವಿತೆಯಷ್ಟೇ ಅಲ್ಲದೆ ಕವಿಗೋಷ್ಠಿಯಲ್ಲಿ ಭಾಗವಹಿಸುವ ಎಲ್ಲರೂ ಕವಿತೆಯನ್ನು ಸಹೃದಯನ ಹೃದಯಕ್ಕೆ ಮುಟ್ಟಿಸಬೇಕೆಂಬುದು ಅವರ ಸದಾಗ್ರಹ.  ವಾಸ್ತವವಾಗಿ ಬೇಂದ್ರೆಯವರ ವ್ಯಕ್ತಿತ್ವ ಕನ್ನಡಿಗರ ಮೇಲೆ ಪ್ರಭಾವ ಬೀರಿದ್ದೆ ಅವರ ಕಾವ್ಯದ ವಾಚನದ ಮೂಲಕ ಎನ್ನಬಹುದು.  1929ರ ಬೆಳಗಾವಿಯ ಸಾಹಿತ್ಯ ಸಮ್ಮೇಳನದಲ್ಲಿ ಹಕ್ಕಿ ಹಾರುತಿದೆ ನೋಡಿದಿರಾ ಕವನವನ್ನು ಓದಿದಾಗ ವಾರಿ ರುಮಾಲು ಸುತ್ತಿದ್ದ ಬೇಂದ್ರೆಯವರ ಗಾರುಡಿಗ ವ್ಯಕ್ತಿತ್ವ ಮಾಸ್ತಿಯಂಥವರನ್ನೂ ಬೆರಗುಗೊಳಿಸಿತು.  ಇಡೀ ಸಭೆಯ ಎದುರಿಗೆ ಕಾಲ ಪಕ್ಷಿ ಹಾರಿಹೋದ ಅದ್ಭುತ ಅನುಭವವನ್ನು ಸೃಷ್ಟಿಸಿದ ಕಾವ್ಯ ವಾಚನದ ಮಾಂತ್ರಿಕ ಕ್ರಿಯೆ ಅಂದು ನಡೆದುಹೋಯಿತು.  ಇದಲ್ಲದೆ 1943ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡುತ್ತಾ ಬೇಂದ್ರೆ ವಾಚಿಸಿದ್ದ ಗಂಗಾವತರಣ ಕವಿತೆಯ ಅನುಭವ ಎಂಥ ರೋಮಾಂಚನಕರವಾದುದೆಂಬುದನ್ನು ಅನೇಕ ಹಿರಿಯರು ಬಹು ಹಿಗ್ಗಿನಿಂದ ನೆನೆಯುತ್ತಿದ್ದರು.

ಬೇಂದ್ರೆಯವರು 14 ನಾಟಕವನ್ನು ಬರೆದಿದ್ದಾರೆ.  10 ವಿಮರ್ಶಾ ಗ್ರಂಥಗಳನ್ನು ಬರೆದಿದ್ದಾರೆ.  ಇದಲ್ಲದೆ ಬೇಂದ್ರೆಯವರು ಮರಾಠಿಯಲ್ಲೂ ಕೆಲವು ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ.  ಹಲವು ಗ್ರಂಥಗಳನ್ನು ಅನುವಾದಿಸಿದ್ದಾರೆ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ, ‘ಅರಳು ಮರಳು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವ, ಕೇಂದ್ರ ಸರ್ಕಾರದ ಪದ್ಮಶ್ರೀ, ಹಲವು ವಿಶ್ವವಿದ್ಯಾಲಯಗಳ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ‘ನಾಕು ತಂತಿ’ ಕವನ ಸಂಕಲನಕ್ಕೆ ಭಾರತದ ಅತ್ಯುಚ್ಚ ಸಾಹಿತ್ಯ ಪ್ರಶಸ್ತಿ ‘ಜ್ಞಾನಪೀಠ ಪ್ರಶಸ್ತಿ’ ದೊರಕಿತು.  ಎಲ್ಲಕ್ಕಿಂತ ಹೆಚ್ಚಿನದು ಎಂದರೆ ಕರ್ನಾಟಕದಲ್ಲಿ ಬೇಂದ್ರೆಯವರನ್ನು ಕರೆದು ಸತ್ಕರಿಸದ ಊರೇ ಇಲ್ಲ ಎಂಬುದು.  ಬೇಂದ್ರೆಯವರು ಅಕ್ಟೋಬರ್ 26, 1981ರ ದೀಪಾವಳಿಯಂದು ಕೀರ್ತಿಶೇಷರಾದರು.  ಈ ಮಹಾನ್ ಕಾವ್ಯಗಾರುಡಿಗ ಚೇತನಕ್ಕೆ  ನಮ್ಮ ಸಾಷ್ಟಾಂಗ ನಮನ.

(ಆಧಾರ: ಈ ಲೇಖನವು ಡಾ. ಜಿ.ಎಸ್. ಸಿದ್ಧಲಿಂಗಯ್ಯ ಅವರು ದ.ರಾ. ಬೇಂದ್ರೆಯವರ ಕುರಿತು ಬರೆದಿರುವ ಲೇಖನವನ್ನು ಆಧರಿಸಿದೆ.)

Friday, January 13, 2017

ಮಕರ ಸಂಕ್ರಾಂತಿ

ಎಳ್ಳಮವಾಸ್ಯೆಯ ಆಸುಪಾಸಿನಲ್ಲಿ ಬರುವ ಇನ್ನೊಂದು ದೊಡ್ಡ ಹಬ್ಬ ಮಕರ ಸಂಕ್ರಾಂತಿ. ಸೂರ್ಯದೇವ ಕರ್ಕರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ. ಮಾಗಿಯ ಚಳಿ. ಒಂದಿಷ್ಟು ಬಿಸಿಲು ತನ್ನ ಶಕ್ತಿಯನ್ನು ಪ್ರದರ್ಶಿಸಲು ಸಜ್ಜಾಗುತ್ತಿರುವ ಕಾಲ. ಹಿಂಗಾರಿ ಹೊಲಗಳಲ್ಲಿ ಸೀತನಿ, ಸುಲಗಾಯಿ ನಮ್ಮನ್ನು ಬಳಸಿಕೊಂಡು ಅಸ್ವಾದಿಸಿ ಎಂದು ಕರೆಕೊಡುತ್ತಿರುತ್ತವೆ.

ಸಂಕ್ರಾಂತಿಗೆ ಒಂದು ದಿನ ಮುಂಚಿತವಾಗಿ ಹೊಲದಿಂದ ಕಬ್ಬು, ಸೀತನಿ, ಸುಲಗಾಯಿ, ಗಜ್ಜರಿ ಎಲ್ಲವನ್ನು ತಂದೂ ‘ಬೋಗಿ’ಯಂದು ದೇವರಿಗೆ ಸಮರ್ಪಿಸಿ ತಾವೂ ತಿನ್ನುತ್ತಾರೆ. ಅಂದಿನಿಂದ ಜೋಳ ಬಲಿಯುವ ವವರೆಗೂ ಮಿತ್ರರೊಡನೆ, ಬಂಧು ಬಾಂಧವರೊಡನೆ ಚಕ್ಕಡಿ ಕಟ್ಟಿಕೊಂಡು ಹೋಗಿ ಸೀತನಿ ಉದುರಿಸಿ, ಮನೆಯಿಂದ ಒಯ್ದ ತರಹೇವಾರಿ ಚಟ್ನಿ, ಬೆಲ್ಲದೊಂದಿಗೆ ಸೀತನಿ ತಿನ್ನುವದು, ಮೇಲೆ ಮಜ್ಜಿಗೆ ಕುಡಿಯುವವುದು ಅದನ್ನು ಅನುಭವಿಸಿಯೇ ತಿಳಿಯಬೇಕು.

ಸಂಕ್ರಾಂತಿಯ ದಿನ ಚಕ್ಕಡಿ ಕಟ್ಟಿಕೊಂಡು ನದಿಗೆ ಹೋಗಿ ಪುಣ್ಯಸ್ನಾನ ಮಾಡುವುದೂ, ಮನೆಯಿಂದ ಒಯ್ದ ಪಕ್ವಾನ್ನಗಳನ್ನು ನದಿಯ ದಂಡೆಯ ಮೇಲೆ ಕುಳಿತು ಉಣ್ಣುವುದೂ, ದಾನಧರ್ಮ ಮಾಡುವದು ಈ ಹಬ್ಬದಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬರುತ್ತದೆ.

ಸಂಜೆ ಎಳ್ಳು, ಬೆಲ್ಲಗಳ ಮಿಶ್ರಣವನ್ನು ಪರಸ್ಪರ ವಿನಿಮಯ ಮಾಡಿಕೊಂಡು ‘ನಾವೂ ನೀವು ಎಳ್ಳು ಬೆಲ್ಲದಂಗ ಇರೂಣು’ ಎಂದು ಶುಭಾಶಯ ಕೋರುವುದು (ಎಳ್ಳು ಬೆಲ್ಲದ ಮಿಶ್ರಣ ಬಿಡಿಸಲಾಗದಂತಹದು) ಸಂಕ್ರಾಂತಿ ಹಬ್ಬದ ವೈಶಿಷ್ಟವಾಗಿದೆ.🎋🎋🌺

ಶುಭಾಶಯ ಕೂರುವರು :-   ಮಂಜು

Thursday, January 12, 2017

ಸ್ವಾಮಿ ವಿವೇಕಾನಂದರ ಮುತ್ತಿನಂತ ಮಾತುಗಳು


“ಎಲ್ಲಿಯವರೆಗೆ ಲಕ್ಷಾಂತರು ಜನರು ಹಸಿವು ಮತ್ತು ಅಜ್ಞಾನದಲ್ಲಿ ಬಳಲುತ್ತಿರುತ್ತಾರೋ  ಅಲ್ಲಿಯವರೆಗೆ ಅಂಥವರ ಬಗ್ಗೆ ಕಿಂಚಿತ್ತೂ ಗಮನ ಕೊಡದ ಪ್ರತಿಯೊಬ್ಬ ವ್ಯಕ್ತಿಯೂ ದೇಶದ್ರೋಹಿಯೇ ಆಗಿರುತ್ತಾನೆ” - *ಸ್ವಾಮಿ ವಿವೇಕಾನಂದ*

- *"ನಿಮ್ಮ ಸ್ವಭಾವಕ್ಕೆ ಒಪ್ಪುವಂತಹ ಧರ್ಮವೇ ಶ್ರೇಷ್ಟ ಧರ್ಮ. ನಿಮ್ಮಲ್ಲಿ ನೀವು ವಿಶ್ವಾಸವಿಡಿ"*- ಸ್ವಾಮಿ ವಿವೇಕಾನಂದ

- "ನಿಮ್ಮ ಮನಸ್ಸನ್ನು ಆವರಿಸಿಕೊಂಡಿರುವ ಮೂಢನಂಬಿಕೆಯನ್ನು ಹೊರಹಾಕಿ. ಧೀರವಂತರಾಗಿರೋಣ ಬನ್ನಿ. ಸತ್ಯವನ್ನು ಅರಿತು ಸತ್ಯವನ್ನು ಪಾಲಿಸಬೇಕು. ಗುರಿ ದೂರವಿರಬಹುದು ಆದರೆ ಸದಾ ಎಚ್ಚರವಾಗಿದ್ದು ಗುರಿ ತಲುಪುವವರೆಗೂ ವಿಶ್ರಮಿಸದಿರೋಣ"-  ಸ್ವಾಮಿ ವಿವೇಕಾನಂದ

- _*"ಧರ್ಮ ಎಂದರೆ ಯೇಸು ಕ್ರಿಸ್ತ ಅಥವಾ ಪ್ರವಾದಿ ಮಹಮ್ಮದರ ಅನುಕರಣೆ ಅಲ್ಲ. ಅನುಕರಣೆ ಒಳ್ಳೆಯದಾಗಿದ್ದಾಗಲೂ ಅದು ಎಂದೂ ಪ್ರಾಮಾಣಿಕವಾಗಿರಲು ಸಾಧ್ಯವಿಲ್ಲ. ಯೇಸುವನ್ನು ಅನುಕರಿಸಲು ಹೋಗಬೇಡಿ. ಯೇಸುವೇ ಆಗಿ. ನೀವು ಯೇಸು, ಬುದ್ಧ  ಅವರಷ್ಟೇ ಒಳ್ಳೆಯವರಾಗಿರುತ್ತೀರಿ. ಒಂದೊಮ್ಮೆ ಹಾಗಿಲ್ಲ ಎನಿಸಿದರೆ ಹಾಗೆ ಆಗಲು ಯತ್ನಿಸಿ"*_ - ಸ್ವಾಮಿ ವಿವೇಕಾನಂದ

- "ವಿವಿಧ ಧರ್ಮಗಳ ಅಧ್ಯಯನದಿಂದ ತಿಳಿದು ಬರುವ ಸಂಗತಿ ಎಂದರೆ ಎಲ್ಲಾ ಧರ್ಮಗಳ ಸಾರವು ಒಂದೇ ಆಗಿದೆ- ಸ್ವಾಮಿ ವಿವೇಕಾನಂದ"- ಸ್ವಾಮಿ ವಿವೇಕಾನಂದ

- _*"ಜ್ಯೋತಿಷ್ಯ ಮತ್ತಿತರ ಎಲ್ಲಾ ತಂತ್ರ-ಮಂತ್ರಗಳು ಸಾಮಾನ್ಯವಾಗಿ ದುರ್ಬಲ ಮನಸ್ಸಿನ ಚಿನ್ಹೆಗಳು. ಅವು ನಮ್ಮ ಮನಸ್ಸಿನಲ್ಲಿ ಮುಖ್ಯ ಎನಿಸಿದೊಡನೆ ಒಬ್ಬ ತಜ್ಞವೈದ್ಯರನ್ನು ಕಂಡು ಬಂದು ಉತ್ತಮ ಆಹಾರ ಸೇವಿಸಿ ವಿಶ್ರಾಂತಿ ಪಡೆಯುವುದು ಸೂಕ್ತ. ಮೂಢನಂಬಿಕೆ ಪ್ರವೇಶಿಸಿದ ಕ್ಷಣದಲ್ಲಿ ಮೆದುಳು ನಾಶವಾಗುತ್ತದೆ"*_ - ಸ್ವಾಮಿ ವಿವೇಕಾನಂದ

  - "ಪರಿಪೂರ್ಣ ಸ್ತ್ರೀತ್ವದ ಯೋಚನೆ ಎಂದರೆ ಪರಿಪೂರ್ಣ ಸ್ವಾತಂತ್ರ್ಯದ ಯೋಚನೆ ಎಂದರ್ಥ" - ಸ್ವಾಮಿ ವಿವೇಕಾನಂದ

_*"ಬನ್ನಿ, ಮನುಷ್ಯರಾಗಿ! ಯಾವಾಗಲೂ ಪ್ರಗತಿಗೆ ವಿರುದ್ಧವಾಗಿರುವ ಈ ಪುರೋಹಿತರನ್ನು ಒದ್ದೋಡಿಸಿ. ಯಾಕೆಂದರೆ ಅವರು ಎಂದಿಗೂ ಬದಲಾಗುವುದಿಲ್ಲ. ಅವರ ಹೃದಯಗಳೆಂದೂ ವಿಶಾಲಗೊಳ್ಳುವುದಿಲ್ಲ. ಶತಮಾನಗಳ ಮೌಢ್ಯ ಮತ್ತು ನಿರಂಕುಶತೆಯ ಕೂಸುಗಳು ಅವರು. ಈ ಪುರೋಹಿತಶಾಹಿಯನ್ನು ಮೊದಲು ಬೇರು ಸಮೇತ ಕಿತ್ತೊಗೆಯಿರಿ. ಬನ್ನಿ, ಮನುಷ್ಯರಾಗಿ! ನಿಮ್ಮ ಸಂಕುಚಿತ ಬಿಲಗಳಿಂದ ಹೊರ ಬಂದು ಹೊರಜಗತ್ತಿಗೆ ಕಣ್ಣುಹಾಯಿಸಿ. ದೇಶಗಳೆಲ್ಲ ಹೇಗೆ ದಾಪುಗಾಲಿಡುತ್ತಿವೆ ನೋಡಿ! ನೀವು ಮನುಷ್ಯನನ್ನು ಪ್ರೀತಿಸುವಿರಾ? ನಿಮ್ಮ ದೇಶವನ್ನು ಪ್ರೀತಿಸುವಿರಾ? ಹಾಗಿದ್ದರೆ ಬನ್ನಿ, ಉದಾತ್ತವಾದ ವಿಷಯಗಳಿಗಾಗಿ ಹೋರಾಡೋಣ ಬನ್ನಿ. ಹಿಂತಿರುಗಿ ನೋಡಬೇಡಿ. ಏನೇ ಆಗಲಿ ಹಿಂದೆ ನೋಡದೆ ಮುಂದೆ ನೋಡುತ್ತಾ ನಡೆಯಿರಿ"*_ -
- ಸ್ವಾಮಿ ವಿವೇಕಾನಂದ

Sunday, January 08, 2017

ಫ್ಯಾಷನ್ ಟೆಕ್ನಾಲಜಿ ಕೋರ್ಸ್ಗಳಿಗಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಕಲ್ಯಾಣ
ಇಲಾಖೆಯು ಜಿಲ್ಲೆಯ ಹಿಂದುಳಿದ
ವರ್ಗಗಳ ಅರ್ಹ ನಿರುದ್ಯೋಗಿ ಮಹಿಳಾ/
ಪುರುಷ ಅಭ್ಯರ್ಥಿಗಳಿಗಾಗಿ ಬೆಂಗಳೂರಿನ
ನ್ಯಾಷನಲ್ ಇನ್ಸ್ಟ್ಯೂಟ್ ಆಫ್ ಟೆಕ್ನಾಲಜೆ
ಸಂಸ್ಥೆಯಲ್ಲಿ ಫ್ಯಾಷನ್ ಟೆಕ್ನಾಲಜಿಯ
ಕೋರ್ಸ್ಗಳಲ್ಲಿ ಉಚಿತ ತರಬೇತಿಯನ್ನು
ಆಯೋಜಿಸಿದೆ.
18-35 ವರ್ಷ ವಯಸ್ಸಿನ
ದ್ವಿತೀಯ ಪಿಯುಸಿ ಪಾಸಾಗಿರುವ
ಜಿಲ್ಲೆಯ ಆಸಕ್ತ ಹಿಂದುಳಿದ ವರ್ಗಗಳ
ಪ್ರವರ್ಗ-1, 2ಎ, 3ಎ, ಹಾಗೂ 3ಬಿ ಗಳಿಗೆ
ಸೇರಿದ ಅರ್ಹ ನಿರುದ್ಯೋಗಿ ಮಹಿಳಾ/ಪುರುಷ
ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು
ಜಿಲ್ಲಾ ಹಿಂದುಳಿದ ವರ್ಗಗಳ
ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು
ಭರ್ತಿ ಮಾಡಿದ ಅರ್ಜಿಯನ್ನು ಜನವರಿ 17
ರೊಳಗಾಗಿ ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ
www.backwardclasses.kar.nic.in
ವೆಬ್ಸೈಟ್ ಅನ್ನು ಸಂಪರ್ಕಿಸಬಹುದಾಗಿದೆ
ಎಂದು ಪ್ರಕಟಣೆ ತಿಳಿಸಿದೆ.

Friday, January 06, 2017

ನೀವೂ ಸೆಕೆoಡ್ ಹ್ಯಾoಡ್ ವಾಹನವನ್ನೂ ಖರೀದಿಸಬೇಕೇಂದಿದ್ದಿರಾ?

ನೀವೂ ಸೆಕೆoಡ್ ಹ್ಯಾoಡ್ ವಾಹನವನ್ನೂ ಖರೀದಿಸಬೇಕೇಂದಿದ್ದಿರಾ,

ಅದರಲ್ಲೀನ ದಾಖಲೆ ಪತ್ರಗಳೂ ಸರಿಯಾಗಿರಹಬಹುದೇ ಎoಬ ಸoಶಯವೇನಾದರೂ ಬಂತೇ.....?

ಆರ್.ಟಿ.ಓ ದಾಖಲೆ ಪತ್ರಗಳಲ್ಲಿ ಅದು ಯಾರ ಹೆಸರಲ್ಲಿ ನೋಂದಣಿಯಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕೇ.....?

ಹಾಗಾದರೆ ಒಂದು ಎಸ್.ಎಮ್.ಎಸ್. ಸಾಕು

-VAHAN ಎಂದು ಬರೆದು ಸ್ಪೇಸ್ ಕೊಟ್ಟು ನಿಮ್ಮ ವಾಹನದ ಸಂಖ್ಯೆಯನ್ನೂ ಯಾವುದೇ ಅಡ್ಡಗೆರೆ ಅಥವಾ ಸ್ಪೇಸ್ ಇಲ್ಲದೆ 7738299899 ಸಂಖ್ಯೆಗೆ ಎಸ್,ಎಮ್,ಎಸ್ ಕಳುಹಿಸಿದರೆ ಸಾಕು,

ಉದಾ:-" VAHAN KA47JH1234"

ಓoದು ನಿಮಿಷದಲ್ಲಿ ಆ ವಾಹನದ ಮಾಲೀಕರ ಹೆಸರು, ಯಾವ ಆರ್,ಟಿ,ಓ ದಲ್ಲಿ ನೊoದಣಿಯಾಗಿದೆ, ಯಾವ ವಾಹನ, ಆರ್,ಸೀ ಅವಧಿ ಕೊನೆಗೊಳ್ಳುವ ದಿನಾಂಕ, ತೆರಿಗೆ ಪಾವತಿಯಾಗಿದೆಯೇ, ಯಾವ ಬ್ಯಾಂಕಿನಲ್ಲಿ ಸಾಲ ಇದೆ ಅನ್ನೋ ಸoಪೂರ್ಣ ಮಾಹಿತಿಯುಳ್ಳ S.M.S ಬರುತ್ತದೆ.

Thursday, January 05, 2017

2016 ಮೆಲುಕು: ಸದ್ದು ಮಾಡಿದ ಸುದ್ದಿಗಳು

ಏಳು ಬೀಳುಗಳಿಂದ ಕೂಡಿದ 2016 ವರ್ಷ ಮುಗಿಯಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ವರ್ಷಾರಂಭದಲ್ಲೇ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿ ದೇಶವನ್ನೇ ನಡುಗಿಸಿ ಬಿಟ್ಟಿತ್ತು. ವಿಜ್ಞಾನ- ತಂತ್ರಜ್ಞಾನ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಭಾರತ ಮಿಂಚಿದಾಗ, ನವೆಂಬರ್ ತಿಂಗಳು ನೋಟು ಸಮಸ್ಯೆಯನ್ನೆದುರಿಸಬೇಕಾದ ಪರಿಸ್ಥಿತಿ ದೇಶದ ಜನರದ್ದಾಗಿತ್ತು
.
*2016ರಲ್ಲಿ ಸದ್ದು ಮಾಡಿದ ಸುದ್ದಿಗಳ ಪಟ್ಟಿ ಇಲ್ಲಿದೆ.*

*ಜನವರಿ*
* ಜನವರಿ 2 - ಪಠಾಣ್ ಕೋಟ್ ವಾಯು ನೆಲೆ ಮೇಲೆ ಉಗ್ರರ ದಾಳಿ
* ಇಸ್ರೋ ದಿಂದ ಐಆರ್ಎನ್ಎಸ್ಎಸ್-1ಇ ಉಪಗ್ರಹ ಯಶಸ್ವಿ ಉಡಾವಣೆ
* ಅಂತರ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ 1000 ರನ್ ಗಳಿಸಿ ಪ್ರಣವ್ ಧನಾವಡೆ ವಿಶ್ವ ದಾಖಲೆ

*ಫೆಬ್ರವರಿ*
* ನಿಜವಾಯಿತು ಐನ್ಸ್ಟೀನ್ ಭವಿಷ್ಯ ನುಡಿ; ಪತ್ತೆಯಾಯಿತು ಗುರುತ್ವಾಕರ್ಷಣ ಅಲೆ
* ರಸೂಲ್ ಪೂಕುಟ್ಟಿಗೆ ಗೋಲ್ಡನ್ ರೀಲ್ ಪ್ರಶಸ್ತಿ
* ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ ಯೋಧ ಹನುಮಂತಪ್ಪ ಕೊಪ್ಪದ್

*ಮಾರ್ಚ್*
* ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ ಟೆನ್ನಿಸ್ ತಾರೆ ಮರಿಯಾ ಶರಪೋವಾಗೆ ನಿಷೇಧ
* ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಬಾಹುಬಲಿ ಅತ್ಯುತ್ತಮ ಚಿತ್ರ
* ಮಲಯಾಳಂ ನಟ ಕಲಾಭವನ ಮಣಿ ನಿಧನ

*ಏಪ್ರಿಲ್*
* ದೇಶದ ಅತಿ ವೇಗದ ರೈಲು ''ಗತಿಮಾನ್ ಎಕ್ಸ್ಪ್ರೆಸ್'ಗೆ ಚಾಲನೆ
* ಮಹಿಳೆಯರಿಂದ ಶನಿ ಶಿಂಗ್ಣಾಪುರ ದೇಗುಲ ಪ್ರವೇಶ
ಇಕ್ವಿಡಾರ್ನಲ್ಲಿ ಭೂಕಂಪ: 500ಕ್ಕೂ ಹೆಚ್ಚು ಮಂದಿ ಸಾವು

*ಮೇ*
* ಹೈದರಾಬಾದ್ನ ಹುಸೇನ್ ಸಾಗರ್ ಸರೋವರ ಬಳಿ ದೇಶದ ಅತಿದೊಡ್ಡ ತ್ರಿವರ್ಣ ಧ್ವಜಾರೋಹಣ
* ಮೇ -7 ಆಯಪಲ್ ಕಂಪನಿಯ ಇಂಡಿಯಾ ಸಿಇಒ ಸಂಜಯ್ ಕೌಲ್ ನೇಮಕ
* ಮೇ 10 - ಉತ್ತರಾಖಂಡ್ ನಲ್ಲಿ ಹರೀಶ್ ರಾವುತರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ
* ಮೇ 16- ಕೇರಳದಲ್ಲಿ ಎಲ್ ಡಿ ಎಫ್ ಸರ್ಕಾರ ಅಧಿಕಾರಕ್ಕೆ
* ಮೇ 23 ಶ್ರೀಹರಿಕೋಟಾದಲ್ಲಿ ಆರ್ ಎಲ್ ವಿ ( ರೀಯೂಸೆಬಲ್ ಲಾಂಚ್ ವೆಹಿಕಲ್ )ಟೆಕ್ನಾಲಜಿ ಡೆಮಾನ್ ಸ್ಟ್ರೇಟರ್ ಯಶಸ್ವೀ ಪರೀಕ್ಷೆ
* ಮೇ 29- ಅತೀ ವೇಗದ ರೈಲು ಟಾಲ್ಗೋ ಯಶಸ್ವಿ ಪರೀಕ್ಷೆ
* ಹೈದರಾಬಾದ್ನ ಹುಸೇನ್ ಸಾಗರ್ ಸರೋವರ ಬಳಿ ದೇಶದ ಅತಿದೊಡ್ಡ ತ್ರಿವರ್ಣ ಧ್ವಜಾರೋಹಣ
* ಮೇ 29- ಅತೀ ವೇಗದ ರೈಲು ಟಾಲ್ಗೋ ಯಶಸ್ವಿ ಪರೀಕ್ಷೆ

*ಜೂನ್*
* ಜೂನ್ 5- ಫ್ರೆಂಚ್ ಓಪನ್ ಟೆನಿಸ್ ಕಿರೀಟ ಗೆದ್ದ ನೋವಾಕ್ ಜೊಕೊವಿಕ್
* ಸೈನಾ ನೆಹ್ವಾಲ್ ಮುಡಿಗೆ ಆಸ್ಟ್ರೇಲಿಯನ್ ಬ್ಯಾಡ್ಮಿಂಟನ್ ಕಿರೀಟ
* ಮೈಕ್ರೋಸಾಫ್ಟ್ ನಿಂದ ಲಿಂಕ್ಡ್ ಇನ್ ಖರೀದಿ- ₹1,75000 ಕೋಟಿಗೆ ಖರೀದಿ
* ಮೋಹನ ಸಿಂಗ್, ಅವನಿ ಚೌಧರಿ, ಭಾವನಾ ಕಾಂತ್ - ಯುದ್ಧ ವಿಮಾನ ಪೈಲೆಟ್ ಗಳಾದ ಮಹಿಳೆಯರು
* ಜೂನ್ 22 ಏಕಕಾಲಕ್ಕೆ 20 ಉಪಗ್ರಹಗಳ ಉಡ್ಡಯನ
* ಬ್ರೆಕ್ಸಿಟ್ -ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಕ್ಕೆ
* ಭಾರತಕ್ಕೆ ದಕ್ಕದ ಎನ್ಎಸ್ಜಿ ಸದಸ್ಯತ್ವ
* ಕೋಪಾ ಅಮೆರಿಕಾ ಫುಟ್ಬಾಲ್ ಫೈನಲ್ ನಲ್ಲಿ ಅರ್ಜೆಂಟಿನಾ ವಿರುದ್ಧ ಗೆದ್ದ ಚಿಲಿ
* ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ (ಎಂಟಿಸಿಆರ್ ) ನಲ್ಲಿ ಸದಸ್ಯತ್ವ ಪಡೆದ ಭಾರತ
* ಜೂನ್ 29 -ನೌಕಾ ಸೇನೆಗೆ ವರುಣಾಸ್ತ್ರ ಸೇರ್ಪಡೆ
* ಜೂನ್ 30 - ಸಲಿಂಗಕಾಮಿಗಳು ಟ್ರಾನ್ಸ್ ಜೆಂಡರ್ ಗಳೆಂದು ಪರಿಗಣಿಸಲ್ಪಡುವುದಿಲ್ಲ - ಸುಪ್ರೀಂ ಕೋರ್ಟ್
* ಜೂನ್ 4- ಬಾಕ್ಸಿಂಗ್ ದಂತ ಕತೆ ಮುಹಮ್ಮದ್ ಅಲಿ ನಿಧನ

*ಜುಲೈ*
* ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ವಾಯುಪಡೆದೆ ಸೇರ್ಪಡೆ
* ಗುರು ಗ್ರಹದ ಕಕ್ಷೆಗೆ ಸೇರಿದ ಜೂನೋ ಗಗನ ನೌಕೆ
* ಜುಲೈ 8- ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ
* ಜುಲೈ 10 - ಫ್ರಾನ್ಸ್ ಪರಾಭವಗೊಳಿಸಿದ ಪೋರ್ಚುಗಲ್ಗೆ ಯೂರೋ ಕಪ್
* ಏಷ್ಯಾ ಫೆಸಿಪಿಕ್ ಸೂಪರ್ ಮಿಡಲ್​ವೇಟ್ ಪ್ರಶಸ್ತಿ ಗೆದ್ದ ಬಾಕ್ಸರ್ ವಿಜೇಂದರ್ ಸಿಂಗ್
* ತೆರೆಸಾ ಮೇ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ
* ಟರ್ಕಿ ಸೇನಾ ದಂಗೆ: 200ಕ್ಕಿಂತಲೂ ಹೆಚ್ಚು ಸಾವು- ಸೇನೆ ಕೈಯಿಂದ ಅಧಿಕಾರ ಮರಳಿ ಪಡೆದು ದೇಶದ ಆಡಳಿತದ ಮೇಲೆ ಮತ್ತೆ ನಿಯಂತ್ರಣ
* ಸೇನಾಪಡೆ ಅಧಿಕಾರಿಗಳು ಸೇರಿದಂತೆ 29 ಮಂದಿ ಪ್ರಯಾಣಿಸುತ್ತಿದ್ದ ವಾಯುಸೇನೆಯ ವಿಮಾನ ನಾಪತ್ತೆ
* ಕರ್ನಾಟಕದ ಮಾನವ ಹಕ್ಕು ಹೋರಾಟಗಾರ ಬೆಜವಾಡ ವಿಲ್ಸನ್, ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತ ವಿದ್ವಾಂಸ ಚೆನ್ನೈನ ಟಿ.ಎಂ ಕೃಷ್ಣ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ

*ಅಗಸ್ಟ್*
* ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಆನಂದಿ ಬೆನ್
* ನೇಪಾಳದ ನೂತನ ಪ್ರಧಾನಿಯಾಗಿ ಪುಷ್ಪಕಮಲ್ ದಹಲ್ (ಪ್ರಚಂಡ) ಆಯ್ಕೆ
* ಅಗಸ್ಟ್ 7- ವಿಜಯ್ ರೂಪಾಣಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
* 16 ವರ್ಷಗಳ ದೀರ್ಘ ಉಪವಾಸ ಅಂತ್ಯಗೊಳಿಸಿದ ಇರೋಮ್ ಚಾನು ಶರ್ಮಿಳಾ
* ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಸೂದೆ ಪಾಸ್
* ಹವಿಲ್ದಾರ್ ಹಂಗ್ಪನ್ ದಾದಾಗೆ ಅಶೋಕ ಚಕ್ರ
* ಲೆ.ಕರ್ನಲ್ ಇ.ಕೆ.
ನಿರಂಜನ್ ಅವರಿಗೆ ಶೌರ್ಯ ಚಕ್ರ
* ಚೀನಾದಲ್ಲಿ ಅತೀ ದೊಡ್ಡ ಗಾಜಿನ ಸೇತುವೆ ಅನಾವರಣ
* ರಿಯೊ ಒಲಿಂಪಿಕ್ಸ್ : ಬ್ಯಾಡ್ಮಿಂಟನ್ (ಮಹಿಳಾ ವಿಭಾಗ)ದಲ್ಲಿ ಪಿವಿ ಸಿಂಧುವಿಗೆ ಬೆಳ್ಳಿ ಪದಕ
* ಮಹಿಳಾ ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲಿಕ್ಗೆ ಕಂಚಿನ ಪದಕ
* ಮಹಿಳಾ ಜಿಮ್ನಾಸ್ಟಿಕ್ಸ್ನಲ್ಲಿ ದೀಪಾ ಕರ್ಮಾಕರ್ಗೆ ನಾಲ್ಕನೇ ಸ್ಥಾನ
* ಅಗಸ್ಟ್ 24 -ಇಟೆಲಿಯಲ್ಲಿ ಭೂಕಂಪ ; 250ಕ್ಕಿಂತಲೂ ಹೆಚ್ಚು ಸಾವು
* ಅಗಸ್ಟ್ 28 - ಶೀಲಂಕಾ ಕ್ರಿಕೆಟಿಗ ತಿಲಕೇರತ್ನ ದಿಲ್ಶಾನ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ

*ಸಪ್ಟೆಂಬರ್*
* ಮದರ್ ತೆರೆಸಾಗೆ ಸಂತ ಪದವಿ
* ಶೂಟರ್ ಅಭಿನವ್ ಬಿಂದ್ರಾ ವಿದಾಯ
* ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅಧಿಕಾರವಾಧಿ ಅಂತ್ಯ
* ಸೆಪ್ಟೆಂಬರ್ 5- ಭಾರತೀಯ ರಿಸರ್ವ್ ಬ್ಯಾಂಕ್ ನೂತನ ಗವರ್ನರ್ ಆಗಿ ಉರ್ಜಿತ್ ಪಟೇಲ್ ಅಧಿಕಾರ ಸ್ವೀಕಾರ
* ಕಕ್ಷೆ ಸೇರಿದ ಇನ್ಸ್ಯಾಟ್ 3 ಡಿ ಆರ್
* ಮಸ್ವಿಜರ್ಲೆಂಡ್ನ ಸ್ಟಾನಿಸ್ಲಾಸ್ ವಾವರಿಂಕಾ ಮುಡಿಗೆ ಯುಎಸ್ ಓಪನ್ ಕಿರೀಟ
* ಯುಎಸ್ ಓಪನ್ ಮಹಿಳಾ ಟೆನಿಸ್ ಕಿರೀಟ ಗೆದ್ದ ಜರ್ಮನಿಯ ಆಯಂಜಲಿಕ್ ಕೆರ್ಬರ್
* ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲಿ ಅತೀ ಹೆಚ್ಚು ಪಂದ್ಯ (308) ಗೆದ್ದ ದಾಖಲೆ ತನ್ನದಾಗಿಸಿಕೊಂಡ ಸೆರೀನಾ ವಿಲಿಯಮ್ಸ್
* ರಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಮರಿಯಪ್ಪನ್ ತಂಗವೇಲು (ಹೈಜಂಪ್), ವರುಣ್ ಸಿಂಗ್ ಭಾಟಿಗೆ ಕಂಚು
* ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ದೇವೇಂದ್ರ ಜಜಾರಿಯಾಗೆ ಚಿನ್ನ
* ಶಾಟ್ಪುಟ್ ಮಹಿಳಾ ವಿಭಾಗದಲ್ಲಿ ದೀಪಾ ಮಲಿಕ್ಗೆ ಬೆಳ್ಳಿ
* ಸಪ್ಟೆಂಬರ್ 18- ಉರಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: 19 ಸೈನಿಕರು ಹುತಾತ್ಮ
* ನವದೆಹಲಿಯಲ್ಲಿರುವ ಪ್ರಧಾನಿ ಅಧಿಕೃತ ನಿವಾಸವಿರುವ ರೇಸ್ ಕೋರ್ಸ್ ರಸ್ತೆಯ ಹೆಸರು ಕಲ್ಯಾಣ್ ಮಾರ್ಗ್ ಎಂದು ಬದಲಾವಣೆ
* ಅನ್ಯಗ್ರಹ ಜೀವಿಗಳನ್ನು ಪತ್ತೆ ಹಚ್ಚಲಿರುವ ಅತೀ ದೊಡ್ಡ ದೂರದರ್ಶಕ ಚೀನಾದಲ್ಲಿ ಕಾರ್ಯಾರಂಭ
* ಸೆಪ್ಟೆಂಬರ್ 23ರಿಂದ 27ರವರೆಗೆ ನಡೆದ ಭಾರತದ 500ನೇ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲವು
* ಸಪ್ಟೆಂಬರ್ 29 - ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತದ ಸೇನೆಯಿಂದ ನಿರ್ದಿಷ್ಟ ದಾಳಿ

*ಅಕ್ಟೋಬರ್*
* ಪ್ಯಾರಿಸ್ ಹವಾಮಾನ ಒಪ್ಪಂದ ಸೇರಿದ ಭಾರತ
* ಅಮೆರಿಕದ ಹೈಟಿ ರಾಜ್ಯಕ್ಕೆ ಅಪ್ಪಳಿಸಿದ ಮ್ಯಾಥ್ಯೂ ಚಂಡಮಾರುತ
* ಕಕ್ಷೆ ಸೇರಿದ ಜಿಸ್ಯಾಟ್ 18
* ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಾರ್ಕ್ ಶೃಂಗಸಭೆ ರದ್ದು
*ಭಾರತದ ಶೂಟರ್ ಜಿತು ರಾಯ್ ಚಾಂಪಿಯನ್ಸ್ ಆಫ್ ಚಾಂಪಿಯನ್ಸ್ ಪಟ್ಟ
* ಅಕ್ಟೋಬರ್ 15, 16ರಂದು 8ನೇ ಬ್ರಿಕ್ಸ್ ಶೃಂಗಸಭೆ ಗೋವಾದಲ್ಲಿ ನಡೆಯಿತು
*ಕೊಲಂಬಿಯಾದ ಅಧ್ಯಕ್ಷ ಜಾನ್ ಮ್ಯಾನುವೆಲ್ ಸ್ಯಾಂಟೋಸ್ ಅವರು 2016ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ
*ಅಮೆರಿಕದ ಲೇಖಕ, ಹಾಡುಗಾರ, ಗೀತ ರಚನೆಕಾರ ಬಾಬ್ ಡೈಲನ್ 2016ನೇ ಸಾಲಿನ ಸಾಹಿತ್ಯ ನೊಬೆಲ್
*ಡೇವಿಡ್ ಜೆ. ಥೌಲೆಸ್, ಎಫ್.ಡಂಕನ್ ಎಂ.ಹಲ್ಡೇನ್, ಜೆ.ಮೈಕೆಲ್ ಕೋಸ್ಟೆರ್ಲಿಟ್ಸ್ - 2016ನೇ ಸಾಲಿನ ಭೌತಶಾಸ್ತ್ರ ನೊಬೆಲ್
*ಜಪಾನಿನ ಯೋಶಿನೋರಿ ಒಸೂಮಿ - ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ
*ಫ್ರಾನ್ಸ್ ನ ಜೀನ್ ಪಿಯರ್ ಸಾವೇಜ್, ಅಮೆರಿಕದ ಫ್ರೇಸರ್ ಸ್ಟೋಡರ್ಟ್, ನೆದರ್ ಲ್ಯಾಂಡ್ನ ಬರ್ನಾರ್ಡ್ ಫೆರಿಂಗ - ರಸಾಯನ ಶಾಸ್ತ್ರದ ನೊಬೆಲ್
*ಅಮೆರಿಕದ ಅರ್ಥಶಾಸ್ತ್ರಜ್ಞ ಆಲಿವರ್ ಹಾರ್ಟ್ ಮತ್ತು ಫಿನ್ಲೆಂಡ್ನ ಬೆಂಗ್ಟ್ ಹೋಲ್ಮಸ್ಟ್ರಾಮ್ - ಅರ್ಥಶಾಸ್ತ್ರ ನೊಬೆಲ್
* ಅಕ್ಟೋಬರ್ 17- ನೌಕಾಪಡೆಗೆ 'ಅರಿಹಂತ್' ಸೇರ್ಪಡೆ
* 'ಪ್ರಜಾ'ಎಂಬ ಹೊಸ ಪಕ್ಷ ಹುಟ್ಟುಹಾಕಿದ ಮಣಿಪುರದ ಐರನ್ ಲೇಡಿ ಇರೋಮ್ ಶರ್ಮಿಳಾ
* ಐಎನ್ಎಸ್ ತಿಹಾಯು ನೌಕಾಪಡೆಗೆ ಸೇರ್ಪಡೆ
* ಕಬಡ್ಡಿ ವಿಶ್ವಕಪ್ನಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಕಿರೀಟ
* ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಗೆ ಕೊಕ್
* ಅಮೆರಿಕದ ಖ್ಯಾತ ಸಾಹಿತಿ ಪಾಲ್ ಬೇಟ್ಟಿ ಅವರಿಗೆ ಮ್ಯಾನ್ ಬೂಕರ್ ಪ್ರಶಸ್ತಿ
* ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿ ಗೆದ್ದ ಭಾರತ

*ನವೆಂಬರ್*
* ನವೆಂಬರ್ 5- ಮೊದಲ ಬಾರಿ ವನಿತಾ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ
* 100 ಕೋಟಿ ಕ್ಲಬ್ ಗೆ ಪುಲಿಮುರುಗನ್ - ₹100 ಕೋಟಿ ಕ್ಲಬ್ ಸೇರಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆ
* ನವೆಂಬರ್ 8- ₹500 ಮತ್ತು ₹1000 ಮುಖಬೆಲೆಯ ನೋಟುಗಳು ರದ್ದು
* ನವೆಂಬರ್ 8 - ಅಮೆರಿಕ ಅಧ್ಯ ಕ್ಷರಾಗಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆಯ್ಕೆ
* ನವೆಂಬರ್ 9 - ಭಾರತ- ಜಪಾನ್ ಅಣು ಒಪ್ಪಂದಕ್ಕೆ ಸಹಿ
* ನವೆಂಬರ್ 20 - ಉತ್ತರ ಪ್ರದೇಶದಲ್ಲಿ ರೈಲು ಅವಘಡ; 150ಕ್ಕಿಂತಲೂ ಹೆಚ್ಚು ಮಂದಿ ಸಾವು
* ನವೆಂಬರ್ 20 - ಚೀನಾ ಸೂಪರ್ ಸೀರಿಸ್ ಕಿರೀಟ ಗೆದ್ದ ಪಿವಿ ಸಿಂಧು
* ನವೆಂಬರ್ 21- ಐಎನ್ಎಲ್ ಚೆನ್ನೈ ಯುದ್ಧನೌಕೆ ನೌಕಾ ಸೇನೆಗೆ ಸೇರ್ಪಡೆ
*ರಣಜಿ ಕ್ರಿಕೆಟ್ ಪಂದ್ಯದಲ್ಲಿ ದೆಹಲಿಯ ರಿಷಬ್ ಪಂತ್ ಅತಿ ವೇಗದ ಶತಕ ದಾಖಲೆ (48 ಎಸೆತಗಳಲ್ಲಿ 100 ರನ್)ನಿಧನ
* ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಡಾ ಎಂ ಬಾಲ ಮುರಳಿ ಕೃಷ್ಣ ವಿಧಿವಶ

*ಡಿಸೆಂಬರ್*
* ಉಸೇನ್ ಬೋಲ್ಟ್ ಅವರಿಗೆ ಅಂತರ ರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ನೀಡುವ ಶ್ರೇಷ್ಠ ಕ್ರೀಡಾಪಟು ಪುರಸ್ಕಾರ
* ವಿಶ್ವ ಚೆಸ್ ಚಾಂಪಿಯನ್ಶಿಪ್ ನಲ್ಲಿ ಮಾಗ್ನಸ್ ಕಾರ್ಲ್ಸನ್ ಗೆಲುವು
* ಡಿಸೆಂಬರ್ 6- ತಮಿಳುನಾಡು ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಪ್ರಮಾಣ ವಚನ
* ರಿಸೋರ್ಸ್ಸ್ಟಾಟ್ 2ಎ ಉಪಗ್ರಹ ಯಶಸ್ವಿ ಉಡಾವಣೆ
* ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೈಮ್ ನಿಯತಕಾಲಿಕದ ವರ್ಷದ ವ್ಯಕ್ತಿಯಾಗಿ ಆಯ್ಕೆ
*ತಮಿಳುನಾಡು- ಆಂಧ್ರ ಪ್ರದೇಶ ಕರಾವಳಿಗೆ ಅಪ್ಪಳಿಸಿದ ವಾರ್ದಾ ಚಂಡ ಮಾರುತ
* ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಮದ್ಯದ ಅಂಗಡಿಗಳಿಗೆ ನಿಷೇಧ ವಿಧಿಸಿದ ಸುಪ್ರೀಂಕೋರ್ಟ್
* ಇಂಡಿಯನ್ ಸೂಪರ್ ಲೀಗ್ ಪಂದ್ಯಾವಳಿಯಲ್ಲಿ ಅಟ್ಲೆಟಿಕೊ ಡಿ ಕೋಲ್ಕತ್ತ ಚಾಂಪಿಯನ್
* ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಕರುಣ್ ನಾಯರ್ ಗೆ ತ್ರಿಶತಕ ದಾಖಲೆ
* ಬೌಲರ್ ಆರ್.ಅಶ್ವಿನ್ಗೆ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ
ನಿಧನ
* ಡಿಸೆಂಬರ್ 5- ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನ
* ಡಿಸೆಂಬರ್ 7- ಪತ್ರಕರ್ತ, ರಾಜಕೀಯ ವಿಶ್ಲೇಷಕ, ನಾಟಕ, ಸಿನಿಮಾ ಕಲಾವಿದ ಚೋ ರಾಮಸ್ವಾಮಿ ನಿಧನ

Monday, January 02, 2017

144 ರೂ. ರಿಚಾರ್ಜ್ ಮಾಡಿ, 6 ತಿಂಗಳು ಎಷ್ಟು ಬೇಕಾದ್ರೂ ಮಾತನಾಡಿ

ಚೆನ್ನೈ: ರಿಲಯನ್ಸ್ ಜಿಯೋ ಸೇವೆಯ ಬಳಿಕ ಈಗ ದರ ಸಮರ ಮತ್ತೆ ಆರಂಭವಾಗಿದ್ದು, ಬಿಎಎಸ್‍ಎನ್‍ಎಲ್ ಈಗ ಗ್ರಾಹಕರಿಗೆ ಅನ್‍ಲಿಮಿಟೆಡ್ ಕರೆಗಳ ಆಫರ್ ಪ್ರಕಟಿಸಿದೆ.

144 ರೂ. ರಿಚಾರ್ಜ್ ಮಾಡಿದರೆ ಸ್ಥಳೀಯ ಮತ್ತು ಎಸ್‍ಟಿಡಿ ಕರೆ ಗಳನ್ನು ಉಚಿತವಾಗಿ ಮಾಡಬಹುದು ಎಂದು ಬಿಎಸ್‍ಎನ್‍ಎಲ್ ಹೇಳಿದೆ.

ಹೊಸ ಆಫರ್ 6 ತಿಂಗಳವರೆಗೆ ಲಭ್ಯವಿದ್ದು, ತಿಂಗಳಿಗೆ 300 ಎಂಬಿ ಡೇಟಾ ಕೂಡ ಉಚಿತವಾಗಿ ಸಿಗಲಿದೆ. ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರು ಈ ಕೊಡುಗೆ ಬಳಸಬಹುದು ಎಂದು ಬಿಎಸ್‍ಎನ್‍ಎಲ್ ಅಧ್ಯಕ್ಷ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ.

ದೇಶದಲ್ಲಿ ಈಗ 4,400 ವೈಫೈ ಹಾಟ್‍ಸ್ಪಾಟ್ ಆರಂಭಿಸಿದ್ದೇವೆ, ಮುಂದಿನ ಒಂದು ವರ್ಷದಲ್ಲಿ ಒಟ್ಟು 40 ಸಾವಿರ ವೈಫೈ ಹಾಟ್‍ಸ್ಪಾಟ್ ಆರಂಭಿಸುವ ಗುರಿಯನ್ನು ಹಾಕಿದ್ದೇವೆ ಎಂದು ಅವರು ಹೇಳಿದರು.