ಉದ್ಯೋಗಿಗಳ ಗ್ರಾಚ್ಯುಟಿ ಮೊತ್ತದ ಮೇಲಿದ್ದ ಮಿತಿಯನ್ನು ಸರಕಾರ 10 ಲಕ್ಷದಿಂದ 20 ಲಕ್ಷ ರುಪಾಯಿಗೆ ಏರಿಕೆ ಮಾಡಿದೆ. ದ ಪೇಮಂಟ್ ಆಫ್ ಗ್ರಾಚ್ಯುಟಿ ಆಕ್ಟ್ (ತಿದ್ದುಪಡಿ) ಮಸೂದೆ 2017 ಅನ್ನು ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವರ್ ಸದನದಲ್ಲಿ ಮಂಡಿಸಿದರು.ವಿರೋಧ ಪಕ್ಷಗಳು ಈ ವೇಳೆ ಘೋಷಣೆ ಕೂಗಿದವು. ಪ್ರತಿಯಾಗಿ ಬಿಜೆಪಿಯವರೂ ಘೋಷಣೆ ಹಾಕಿದರು. ಪೇಮಂಟ್ ಆಫ್ ಗ್ರಾಚ್ಯುಟಿ ಆಕ್ಟ್ 1972ರ ಅನ್ವಯ ಕಾರ್ಖಾನೆ, ಗಣಿಗಾರಿಕೆ, ಪ್ಲಾಂಟೇಷನ್, ಬಂದರು, ರೈಲ್ವೆ ಕಂಪನಿ, ಮಳಿಗೆ ಅಥವಾ ಇನ್ಯಾವುದೇ ಸಂಸ್ಥೆಗಳಿಗೆ ಇದು ಅನ್ವಯ ಆಗುತ್ತದೆ.ಅಂಥಲ್ಲಿ ಐದು ವರ್ಷ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಿದ್ದರೆ ಗ್ರಾಚ್ಯುಟಿ ನೀಡಬೇಕು. ಅಂದಹಾಗೆ ಈ ಗ್ರಾಚ್ಯುಟಿ ಮೊತ್ತವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?ಅದಕ್ಕೊಂದು ಸೂತ್ರವಿದೆ. ಆ ಉದ್ಯೋಗಿ ಒಟ್ಟಾರೆಯಾಗಿ ಅಲ್ಲಿ ಎಷ್ಟು ವರ್ಷ ಕಾರ್ಯ ನಿರ್ವಹಿಸಿದರು ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ವರ್ಷಕ್ಕೆ ಹದಿನೈದು ದಿನದಂತೆ ಸಂಬಳ ಲೆಕ್ಕ ಹಾಕಿ, ಅವರು ಎಷ್ಟು ವರ್ಷ ಕೆಲಸ ನಿರ್ವಹಿಸಿರುತ್ತಾರೋ ಅಷ್ಟು ವರ್ಷವನ್ನು ಗುಣಿಸಲಾಗುತ್ತದೆ. ಬಂದ ಮೊತ್ತವೇ ಗ್ರಾಚ್ಯುಟಿ.2010ರಲ್ಲಿ ಗ್ರಾಚ್ಯುಟಿ ಮೊತ್ತಕ್ಕೆ ಗರಿಷ್ಠ 10 ಲಕ್ಷ ಎಂದು ಮಿತಿ ಹಾಕಲಾಯಿತು. ಆ ನಂತರ ಏರುತ್ತಿರುವ ಹಣದುಬ್ಬರ, ವೇತನ ಮತ್ತಿತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಖಾಸಗಿ ಹಾಗೂ ಸರಕಾರಿ ವಲಯಗಳಲ್ಲೇ ಗ್ರಾಚ್ಯುಟಿ ಮಿತಿಯಲ್ಲೇ ಏರಿಕೆ ಮಾಡಲಾಗುತ್ತಿದೆ. ಕಾಯ್ದೆಗೆ ತಿದ್ದುಪಡಿ ತರುವ ಬದಲು ಅಧಿಸೂಚನೆ ಹೊರಡಿಸಿದರೆ, ಆಯಾ ಸಮಯಕ್ಕೆ ತಕ್ಕಂತೆ ಆ ಮಿತಿಯನ್ನು ಮುಂದಿನ ವೇತನ ಆಯೋಗಗಳು ಶಿಫಾರಸು ಮಾಡಬಹುದು ಎಂದು ಕೂಡ ಹೇಳಲಾಗಿದೆ.ತಾಯ್ತನದ ವೇತನಸಹಿತ ರಜೆಯನ್ನು ಹೆಚ್ಚಿಸುವ ಪ್ರಸ್ತಾವವನ್ನು ಕೂಡ ಸರಕಾರ ಮುಂದಿಟ್ಟಿದೆ. ಮಾತೃತ್ವ ಅನುಕೂಲ (ತಿದ್ದುಪಡಿ) ಕಾಯ್ದೆ, 2017ರ ಮೂಲಕ ತಾಯ್ತನದ ವೇತನ ಸಹಿತ ರಜಾ 26 ವಾರಕ್ಕೆ ಹೆಚ್ಚಿಸುವ ಉದ್ದೇಶವಿದೆ. ಈ ವರೆಗೆ ಹನ್ನೆರಡು ವಾರದವರೆಗೆ ಇದ್ದ ಮಾತೃತ್ವ ರಜಾವನ್ನು ಇಪ್ಪತ್ತಾರು ವಾರಗಳಿಗೆ ವಿಸ್ತರಿಸುವುದನ್ನು ಸೇರಿಸಲಾಗಿದೆ ಎಂದು ಹೇಳಿಕೆಯಲ್ಲಿದೆ.
ಪುಟಗಳು
Wednesday, December 20, 2017
Friday, December 15, 2017
ನೃಪತುಂಗ ಪ್ರಶಸ್ತಿಗೆ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಆಯ್ಕೆ
ಬೆಂಗಳೂರು, ಡಿಸೆಂಬರ್ 14 : ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರು 2018ನೇ ಸಾಲಿನ 'ನೃಪತುಂಗ ಸಾಹಿತ್ಯ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕೊಡಮಾಡುವ ಪ್ರಶಸ್ತಿ ಇದಾಗಿದೆ. ಬಿಎಂಟಿಸಿಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದೂವರೆ ಕೋಟಿ ರೂ ಗಳ ದತ್ತಿನಿಧಿಯನ್ನು ಸ್ಥಾಪಿಸಿ ಅದರಿಂದ ಬರುವ ಬಡ್ಡಿ ಹಣದಲ್ಲಿ ಏಳು ಲಕ್ಷ ಎರೂ. ಮೊತ್ತದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಪ್ರಶಸ್ತಿ ಸ್ಥಾಪಿಸಿದೆ.
ಕನ್ನಡ ಸಾರಸ್ವತ ಪ್ರಪಂಚದ ಶ್ರೇಷ್ಠ ಲೇಖಕರಿಗೆ ಈ ಪ್ರಶಸ್ತಿಯನ್ನು 2008 ರಿಂದ ನೀಡುತ್ತಾ ಬಂದಿದೆ. ಕನ್ನಡ ಸಾಹಿತ್ಯ ಪ್ರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಆಯ್ಕೆ ಸಮಿತಿಯು ಎಸ್. ಎಲ್. ಭೈರಪ್ಪ ಅವರನ್ನು ಆಯ್ಕೆ ಮಾಡಿದೆ.
ಕವಿ ಬಿ.ಆರ್. ಲಕ್ಮಣರಾವ್, ವಿದ್ವಾಂಸರಾದ ವೀರಣ್ಣ ರಾಜೂರ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಡಾ. ಎ.ಎನ್. ಪ್ರಕಾಶ್ ಗೌಡ, ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿ ವಿಜಯಕುಮಾರ್ ಕ.ರಾ.ರ.ಸಾ.ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷರಾದ ವ.ಚ. ಚನ್ನೇಗೌಡ ಅವರುಗಳಿದ್ದ ಸಮಿತಿ ಆಯ್ಕೆ ಮಾಡಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 'ಮಯ್ಯೂರ ವರ್ಮ ಸಾಹಿತ್ಯ ಪ್ರಶಸ್ತಿ': ನೃಪತುಂಗ ಸಾಹಿತ್ಯ ಪ್ರಶಸ್ತಿ ಜತೆಗೆ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿರುವ 45 ವರ್ಷದೊಳಗಿನ ಸಾಹಿತಿಗಳಿಗೆ ಪ್ರಶಸ್ತಿ ನೀಡಲು ಮಯ್ಯೂರವರ್ಮ ಸಾಹಿತ್ಯ ಪ್ರಶಸ್ತಿ ನೀಡಲಾಗುತ್ತಿದೆ.
ಆಯ್ಕೆ ಸಮಿತಿಯು ರಾಮಲಿಂಗೇಶ್ವರ, ಡಾ. ಸಿ. ನಂದಿನಿ, ಶಾಂತಿ ಕೆ.ಅಪ್ಪಣ್ಣ ಇವರನ್ನು ಸರ್ವಾನುಮತದಿಂದ 2018 ನೇ ಸಾಲಿನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ತಿಳಿಸಿದ್ದಾರೆ.
Monday, November 13, 2017
ಮಕ್ಕಳ ದಿನಾಚರಣೆ ಹಾಗೂ ಚಾಚಾ ನೆಹರುರವರ ಜನ್ಮದಿನದ ಕುರಿತು ಮಾಹಿತಿ
👉 *ವ್ಯಕ್ತಿ ಪರಿಚಯ* :-
*ಜವಾಹರ್ ಲಾಲ್ ನೆಹರು*
*ಜವಾಹರರಿಗೆ ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ.ಮಕ್ಕಳೊಡನೆ ಆಟವಾಡುವುದೆಂದರೆ ಆನಂದ. ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ದಿನವಿಡೀ ದುಡಿತ ವಿದ್ದಾಗಲೂ ಅವರು ಮಕ್ಕಳೊಡನೆ ಆಡುವ ಪ್ರಸಂಗ ತಪ್ಪಿಸುತ್ತಿರಲಿಲ್ಲ. ಯಾವುದೇ ಸಭೆಗೆ ಹೋಗಿರಲಿ, ಎಷ್ಟೇ ಅವಸರದ ಕಾರ್ಯಕ್ರಮವಿರಲಿ ಅವರು ಮಕ್ಕಳನ್ನು ನೋಡಿದ ಕೂಡಲೆ ಎತ್ತಿ ಮುದ್ದಾಡುತ್ತಿದ್ದರು. ‘‘ನಿಜವಾದ ಜವಾಹರರನ್ನು ನೋಡಬೇಕಾದರೆ ಅವರು ಮಕ್ಕಳೊಂದಿಗೆ ಇರುವಾಗ ನೋಡಬೇಕು. ಮಕ್ಕಳಂತೆಯೇ ಮಾತನಾಡಿ, ಅವರ ಹಾಗೆಯೇ ಆಟವಾಡಿ ನಲಿದು ಆನಂದಪಡುತ್ತಾರೆ’’ ಎಂದು ಅವರ ತಂಗಿ ಶ್ರೀಮತಿ ವಿಜಯಲಕ್ಷ್ಮಿ ಪಂಡಿತರು ಹೇಳಿದ್ದಾರೆ. ನವೆಂಬರ್ 14 ನಮ್ಮ ದೇಶದ ಒಬ್ಬ ಮಹಾಪುರುಷರಾದ ಪಂಡಿತ ಜವಾಹರ್ಲಾಲ್ ನೆಹರು ಅವರ ಜನ್ಮದಿನ. ಅಂದು ಭಾರತದಲ್ಲೆಲ್ಲ ‘ಮಕ್ಕಳ ದಿನ’ ಎಂದು ಸಂಭ್ರಮದಿಂದ ಪ್ರತಿವರುಷ ಆಚರಿಸುತ್ತೇವೆ. ಜವಾಹರರನ್ನು ಮಕ್ಕಳು ‘ಚಾಚಾ ನೆಹರೂ’ ಎಂದು ಪ್ರೀತಿ-ಗೌರವಗಳಿಂದ ಕರೆಯುತ್ತಾರೆ. ಚಾಚಾ ಎಂದರೆ ಚಿಕ್ಕಪ್ಪ.*
*ನೆಹರು ಅವರ ಪೂರ್ವಜರ ಹೆಸರು ‘ನೆಹರು’ ಆಗಿದ್ದಿರಲಿಲ್ಲ. ಅವರ ಪೂರ್ವಜರು ಕಾಶ್ಮೀರದಲ್ಲಿದ್ದರು. ಅವರಿಗೆ ‘ರಾಜಕೌಲ’ ಎಂಬ ಹೆಸರಿತ್ತು. ಪಂಡಿತ ರಾಜಕೌಲರು ಸಂಸ್ಕೃತ-ಫಾರಸೀ ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು. ಕ್ರಿ.ಶ. 1716ರಲ್ಲಿ ದಿಲ್ಲಿಯ ಮೊಗಲದೊರೆ ಫರುಕ್ಸಿಯರನು ಕಾಶ್ಮೀರಕ್ಕೆ ಭೆಟ್ಟಿ ಕೊಟ್ಟಾಗ ಪಂಡಿತ ರಾಜಕೌಲರನ್ನು ದಿಲ್ಲಿಗೆ ಕರೆತಂದು ನಗರದ ನಡುವೆ ಹರಿಯುತ್ತಿದ್ದ ಕಾಲುವೆಯ ಪಕ್ಕದಲ್ಲಿ ಮನೆ ಕಟ್ಟಿಸಿಕೊಟ್ಟನು. ಕಾಲುವೆಗೆ ಹಿಂದಿ ಭಾಷೆಯಲ್ಲಿ ‘ನಹರ್’ ಎನ್ನುತ್ತಾರೆ. ಹೀಗಾಗಿ ‘ನಹರ್’ ಪಕ್ಕದ ಮನೆಯವರು ‘ನೆಹರೂ’ ಆದರು.*
👉 *ಬಾಲ್ಯ–ವಿದ್ಯಾಭ್ಯಾಸ*
*ಮೋತೀಲಾಲರು ಕಲಿತು ದೊಡ್ಡವರಾಗಿ ಅಲಹಾಬಾದಿನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿ ಅಪಾರ ಕೀರ್ತಿ ಮತ್ತು ಹಣ ಗಳಿಸಿದರು. ಜವಾಹರರು ಹುಟ್ಟಿದ್ದು 1889ನೇ ನವಂಬರ 14 ರಂದು. ತಾಯಿ ಸ್ವರೂಪರಾಣಿ. ವೈಭವದ ಜೀವನ ಶ್ರೀಮಂತ ತಂದೆಯ ಒಬ್ಬನೇ ಮಗನಾದ ಜವಾಹರರು ರಾಜಕುಮಾರನಂತೆ ಅತ್ಯಂತ ಸುಖದಿಂದ ಬೆಳೆದರು. ಮೋತೀಲಾಲರು ಹೊಸದಾಗಿ ಕಟ್ಟಿಸಿದ ‘ಆನಂದಭವನ’ ವೆಂಬ ಹೆಸರಿನ ಮನೆಯು ಅರಮನೆಯಂತೆಯೇ ಇತ್ತು.*
*ಮೋತೀಲಾಲರು ಸಿಟ್ಟಿನ ಸ್ವಭಾವದವರು. ಜವಾಹರರಿಗೆ ಅವರ ಬಗ್ಗೆ ಹೆದರಿಕೆಯಿತ್ತು. ಒಮ್ಮೆ ಜವಾಹರರು ಚೆನ್ನಾಗಿ ಪೆಟ್ಟು ತಿಂದರು. ಆದದ್ದು ಇಷ್ಟೇ. ಮೋತೀಲಾಲರ ಕೋಣೆಯಲ್ಲಿ ಮೇಜಿನ ಮೇಲೆ ಎರಡು ಪೆನ್ನುಗಳಿದ್ದವು. ಅವನ್ನು ನೋಡಿದಾಗ ಬಾಲಕ ಜವಾಹರರು ‘‘ಎರಡು ಪೆನ್ನುಗಳಿಂದ ಯಾರಾದರೂ ಬರೆಯುತ್ತಾರೆಯೇ, ಒಂದನ್ನು ನಾನು ಇಟ್ಟುಕೊಂಡರೆ ತಪ್ಪೇನು?’’ ಎಂದು ಆಲೋಚಿಸಿ ಒಂದನ್ನು ತೆಗೆದುಕೊಂಡರು. ಆ ಬಳಿಕ ತಂದೆ ಪೆನ್ನು ಕಾಣದೆ ಎಲ್ಲರನ್ನು ಕೇಳಿದರು. ಮಗನನ್ನು ಕೇಳಿದಾಗ ತಾನು ತೆಗೆದುಕೊಂಡಿಲ್ಲವೆಂದ. ಆದರೆ ಹುಡುಕಿದಾಗ ಮಗನ ಬಳಿ ಸಿಕ್ಕಿಬಿಟ್ಟಿತು. ಮಗನಿಗೆ ಚೆನ್ನಾಗಿ ಏಟುಬಿದ್ದವು!*
*ಹೀಗೆ ಸಿಟ್ಟಿನ ಸ್ವಭಾವವಿದ್ದರೂ ತಂದೆಗೆ ಮಗನ ಮೇಲೆ ಬಹಳ ಪ್ರೇಮವಿತ್ತು. ಮಗನಿಗೆ ಒಳ್ಳೆ ಶಿಕ್ಷಣ ಕೊಡಿಸಬೇಕೆಂದು ಮನೆಯಲ್ಲಿಯೇ ಉತ್ತಮ ಶಿಕ್ಷಕರನ್ನಿಟ್ಟರು. ಆಗಿನ ಕಾಲದ ವಿದ್ಯಾವಂತರಂತೆ ಮೋತೀಲಾಲರಿಗೂ ಇಂಗ್ಲಿಷ್ ಭಾಷೆಯ ಬಗ್ಗೆ ಬಹಳ ಮೋಹವಿತ್ತು. ಅದಕ್ಕಾಗಿ ಮಗನಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸಲು ಫರ್ಡಿನೆಂಡ್ ಬ್ರುಕ್ಸ್ ಎಂಬುವನನ್ನು ನೇಮಿಸಿದ್ದರು. ಆತನು ಜವಾಹರರಲ್ಲಿ ಒಳ್ಳೊಳ್ಳೆಯ ಪುಸ್ತಕ ಓದುವ ರುಚಿ ಹುಟ್ಟಿಸಿದ. ಈ ರುಚಿಯು ಜವಾಹರರಿಗೆ ವಿದ್ಯಾರ್ಥಿಯಾಗಿದ್ದಾಗ ಮತ್ತು ಮುಂದೆಯೂ ಬಹಳ ಸಹಾಯಕವಾಯಿತು. ಚಿಕ್ಕಂದಿನಲ್ಲಿ ಜವಾಹರರೊಡನೆ ಆಟವಾಡಲು ‘ಆನಂದಭವನ’ ದಲ್ಲಿ ಸಣ್ಣ ಹುಡುಗರು ಇರಲಿಲ್ಲ. ಅವರ ತಂಗಿ ಸ್ವರೂಪಕುಮಾರಿ-ಮುಂದೆ ಶ್ರೀಮತಿ ವಿಜಯಲಕ್ಷಿ ಪಂಡಿತ್ ಎಂದು ಹೆಸರಾದರು – ಹುಟ್ಟದ್ದು 1900ರ ಆಗಸ್ಟ್ 18 ರಂದು. ಕಿರಿಯ ತಂಗಿ ಕೃಷ್ಣಾ-ಮುಂದೆ ಶ್ರೀಮತಿ ಕಷ್ಣಾ ಹಥೀಸಿಂಗ-ಹುಟ್ಟಿದ್ದು ೧೯೦೭ ರ ನವಂಬರ್ 2ರಂದು. ಆದರೆ ಜವಾಹರರಿಗೆ ಅವರ ಕಕ್ಕಿ ರಾಮಾಯಣ-ಮಹಾಭಾರತಗಳ ಕಥೆಗಳನ್ನೂ, 1857ರ ಸ್ವಾತಂತ್ರ ಸಮರದಲ್ಲಿ ಹೋರಾಡಿದ ದೇಶಭಕ್ತ ವೀರರ ಕಥೆಗಳನ್ನೂ ಹೇಳುತ್ತಿದ್ದರು. ಇದರಿಂದ ಜವಾಹರರಿಗೆ ನಮ್ಮ ದೇಶದ ಹಿರಿಮೆ ತಿಳಿಯುತ್ತಿತ್ತು. ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷರು ನಡೆಸುವ ಅತ್ಯಾಚಾರಗಳ ಬಗ್ಗೆ ಹಿರಿಯರು ಮಾತನಾಡುವುದನ್ನು ಜವಾಹರರು ಬಹಳ ಕುತೂಹಲದಿಂದ ಕೇಳುತ್ತಿದ್ದರು. ಭಾರತೀಯರಿಗೆ ಎಲ್ಲಿಯೂ ಗೌರವದ ಸ್ಥಾನ-ಮಾನವಿರಲಿಲ್ಲ. ಉಪಾಹಾರ ಗೃಹಗಳಲ್ಲಿ, ರೈಲುಡಬ್ಬಿಗಳಲ್ಲಿ, ಸಾರ್ವಜನಿಕ ಉದ್ಯಾನಗಳಲ್ಲಿ- ಹೀಗೆ ಎಲ್ಲ ಕಡೆ ಬ್ರಿಟಿಷರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯಿರುತ್ತಿತ್ತು. ಬ್ರಿಟಿಷರು ಭಾರತೀಯರನ್ನು ಬಹಳ ಕೀಳುಭಾವನೆಯಿಂದ ಕಾಣುತ್ತಿದ್ದರು. ಇದೆಲ್ಲ ಕೇಳಿದಾಗ ಬಾಲಕ ಜವಾಹರರಿಗೆ ಬ್ರಿಟಿಷರ ಮೇಲೆ ಸಿಟ್ಟು ಬರುತ್ತಿತ್ತು.*
👉 *ಇಂಗ್ಲೆಂಡಿನಲ್ಲಿ*
*ಜವಾಹರರಿಗೆ 15 ವರುಷ ದಾಟಿದಾಗ ಮೋತಿಲಾಲರು ಅವರನ್ನು ಇಂಗ್ಲೆಂಡಿನಲ್ಲಿ ‘ಹ್ಯಾರೋ’ ಎಂಬ ಸಾರ್ವಜನಿಕ ಶಾಲೆಗೆ ಸೇರಿಸಿದರು. ಅಲ್ಲಿ ಜವಾಹರರು ಬೀಜಗಣಿತ, ರೇಖಾಗಣಿತ, ಇತಿಹಾಸ, ಸಾಹಿತ್ಯ ಮುಂತಾದ ಎಲ್ಲ ವಿಷಯಗಳಲ್ಲಿ ಉತ್ತಮ ವಿದ್ಯಾರ್ಥಿಯೆಂದು ಹೆಸರು ಪಡೆದು ಬಹುಮಾನ ಗಳಿಸಿದರು. ಜವಾಹರರು ಇಂಗ್ಲೆಂಡಿಗೆ ಹೋದರೂ ಭಾರತದಲ್ಲಿ ನಡೆಯುತ್ತಿದ್ದ ಸಂಗತಿಗಳನ್ನು ತಿಳಿಯಲು ಉತ್ಸುಕರಾಗಿದ್ದರು ಮತ್ತು ಒಳ್ಳೊಳ್ಳೆಯ ಭಾರತೀಯ ಪತ್ರಿಕೆಗಳನ್ನು ತರಿಸಿಕೊಂಡು ಓದುತ್ತಿದ್ದರು.*
*1912 ರ ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಮರಳಿದ ಬಳಿಕ ಜವಾಹರರು ತಂದೆಯವರೊಡನೆ ವಕೀಲಿವೃತ್ತಿ ಪ್ರಾರಂಭಿಸಿದರು. ಅವರು ತೆಗೆದುಕೊಂಡ ಮೊದಲನೆಯ ಪ್ರಕರಣದಿಂದ ಅವರಿಗೆ ೫೦೦ ರೂಪಾಯಿ ಶುಲ್ಕ ಬಂದಿತು. 1916 ರ ಫೆಬ್ರವರಿ 8 ರ ವಸಂತಪಂಚಮಿಯ ದಿನ ದಿಲ್ಲಿಯಲ್ಲಿ ಜವಾಹರರ ಮದುವೆ ಬಹಳ ವೈಭವದಿಂದ ನೆರವೇರಿತು. ಅವರ ಪತ್ನಿ ಕಮಲಾ. ಆಕೆಯೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕೀರ್ತಿ ಗಳಿಸಿದರು. ಜವಾಹರರಿಗೆ ಒಬ್ಬಳೇ ಮಗಳು, ಇಂದಿರಾ ಪ್ರಿಯದರ್ಶಿನಿ.*
*ಜವಾಹರರ ಜೀವನ ನಾಡಿನ ಸ್ವಾತಂತ್ರ ದ ಹೋರಾಟದ ಒಂದು ಭಾಗವಾಗಿ ಹೋಯಿತು. ದೇಶದ ಸ್ವಾತಂತ್ರ ಕ್ಕಾಗಿ ಹೋರಾಟ ನಡೆದಾಗ ಅವರು ನಾಲ್ಕು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಅವರ ಇಡೀ ಜೀವನ ದೇಶಕ್ಕಾಗಿ ಸಮರ್ಪಿತವಾಗಿತ್ತು. ಅವರು ಸರ್ವಶಕ್ತಿಯಿಂದ ಸದಾಕಾಲವೂ ದೇಶಕ್ಕಾಗಿ ದುಡಿಯುತ್ತ ಮುಂದೆ ಮುಂದೆ ಸಾಗಿದರು. ಸೆರೆಮನೆಯಲ್ಲೇ ಇರಲಿ, ಹೊರಗೇ ಇರಲಿ, ಜವಾಹರರು ಯಾವಾಗಲೂ ದೇಶದ ಸ್ವಾತಂತ್ರ , ದೇಶದ ಉನ್ನತಿ, ದೇಶದ ಪ್ರಗತಿ ಇವುಗಳ ಚಿಂತೆಯನ್ನೇ ಮಾಡುತ್ತಿದ್ದರು.*
👉 *ಭಾರತದ ಪ್ರಧಾನಿ*
*ಸ್ವತಂತ್ರ ಭಾರತಕ್ಕೆ ಜವಾಹರಲಾಲ್ ನೆಹರೂ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.*
*ಸ್ವತಂತ್ರಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿ ದೇಶದ ಪ್ರಗತಿ ಸಾಧಿಸುವ ಪೂರ್ಣ ಹೊಣೆ ಹೊರಬೇಕಾಯಿತು. ಹದಿನೇಳು ವರ್ಷಕಾಲ ಅವರು ಸ್ವತಂತ್ರ ಭಾರತದ ಪ್ರಧಾನಿಯಾಗಿದ್ದರು. ಈ ಕಾಲದಲ್ಲಿ ಅವರು ನಮ್ಮ ದೇಶದ ಉನ್ನತಿಗಾಗಿಯಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಹೆಣಗಾಡಿದರು.*
👉 *‘ಭಾರತ ರತ್ನ’*
*1955ರಲ್ಲಿ ದೇಶದ ಜನತೆಯ ಪರವಾಗಿ ರಾಷ್ಟ್ರಪತಿಯವರು ಜವಾಹರರಿಗೆ ‘ಭಾರತರತ್ನ’ ಪದವಿ ನೀಡಿ ಗೌರವಿಸಿದರು.*
*ನಮ್ಮ ದೇಶದ ಉನ್ನತಿಗಾಗಿ ಚಾಚಾ ನೆಹರೂ ಕೊಟ್ಟ ಮಂತ್ರವೆಂದರೆ ‘‘ಆರಾಮ್ ಹರಾಮ್ ಹೈ.’’ ನಾವು ಎಂದಿಗೂ ಸೋಮಾರಿಗಳಾಗಬಾರದೆಂಬುದೇ ಆ ಮಂತ್ರದ ಅರ್ಥ.*
👉 *ಸಾಹಿತಿ ನೆಹರು*
*ಜವಾಹರರು ಸಾಹಿತಿಗಳೂ ಆಗಿದ್ದರು. ಚಿಕ್ಕಂದಿನಿಂದಲೂ ಅವರಿಗೆ ಪುಸ್ತಕಗಳನ್ನು ಓದುವುದೆಂದರೆ ಬಹು ಆಸಕ್ತಿ. ದಿನವಿಡೀ ಬೇರೆ ಬೇರೆ ಕೆಲಸಗಳಿಂದ ದಣಿವಾದರೂ ಅವರು ರಾತ್ರಿ ಮಲಗುವ ಮುಂಚೆ ಸ್ವಲ್ಪ ಸಮಯ ಉತ್ತಮ ಪುಸ್ತಕ ಓದುತ್ತಿದ್ದರು. ಅವರಿಂದ ಇಂಗ್ಲಿಷ್ ಭಾಷೆಯಲ್ಲಿ ರಚಿತವಾದ ಮೂರು ಪುಸ್ತಕಗಳು ಜಗತ್ಪ್ರಸಿದ್ಧವಾಗಿವೆ. ಸಹಜವಾಗಿ ಅನುಕಂಪ ತೋರುವ ಹೃದಯ, ಯಾವ ಸಮಸ್ಯೆಯನ್ನೂ ವಿಶಾಲವಾದ ದೃಷ್ಟಿಯಿಂದ ಕಾಣುವ ವಿವೇಕ ಅವರ ಎಲ್ಲ ಪುಸ್ತಕಗಳಲ್ಲಿ ಕಾಣುತ್ತವೆ.*
👉 *ದೀಪ ಆರಿತು*
*1964ರ ಮೇ 27*
*ರಂದು ನೆಹರು ನಿಧನರಾದರು.* *ಎಲ್ಲ ದೇಶಗಳ ಪ್ರಮುಖರು ಅಂತಿಮಯಾತ್ರೆಯಲ್ಲಿ ಭಾಗವಹಿಸಿ ತಮ್ಮ ಗೌರವ ಸಲ್ಲಿಸಿದರು*
👉 *ಅಪೂರ್ವ ದೇಶಭಕ್ತರು ಅಪೂರ್ವ ವ್ಯಕ್ತಿ*
*ಭಾರತ ಯುಗಧರ್ಮಕ್ಕೆ ಅನುಗುಣವಾಗಿ ಬದಲಾಗಬೇಕು, ತನ್ನ ಚಿಂತನೆ-ಸಂಸ್ಕೃತಿಗಳಲ್ಲಿ ಸತ್ವವಿರುವುದನ್ನು ಉಳಿಸಿಕೊಳ್ಳಬೇಕು, ಆದರೆ ಹೊಸ ಜ್ಞಾನ ಹೊಸ ಚಿಂತನೆಗಳಿಗೆ ಮನಸ್ಸನ್ನು ತೆರೆದಿರಬೇಕು ಎಂದು ನೆಹರೂ ಅವರು ಸಾರಿದರು. ಒಟ್ಟಿನಲ್ಲಿ ಅವರು ಅಪೂರ್ವ ದೇಶಭಕ್ತರು. ಅಪೂರ್ವ ಸ್ನೇಹಪರರಾದ, ಹೃದಯವಂತಿಕೆಯ ವ್ಯಕ್ತಿ.*
Sunday, November 05, 2017
ಭಕ್ತ ಕನಕದಾಸರ ಜಯಂತಿಯ ಕುರಿತು ಮಾಹಿತಿ
*ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತುಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ದವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ.*
👉 *ಜನನ*
*ತಿಮ್ಮಪ್ಪ ನಾಯಕ*
*1509*
*ಬಾಡ, ಹಾವೇರಿ ಜಿಲ್ಲೆ, ಕರ್ನಾಟಕ ರಾಜ್ಯ, ಭಾರತ*
👉 *ಮರಣ*
*1609*
*ಬಾಡ*
👉 *ವೃತ್ತಿ*
*ಹರಿದಾಸರು, ಕೀರ್ತನಕಾರರು, ಕವಿ*
👉 *ಪ್ರಕಾರ/ಶೈಲಿ*
*ಕೀರ್ತನೆ, ಉಗಾಭೋಗ, ಮುಂಡಿಗೆ,ಕಾವ್ಯ*
👉 *ಜೀವನ*
👉 *ಜನನ*
*ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರು ಬರಿ ಕುರುಬ ಜಾತಿಗೆ ಸಿಮಿತವಾತ ಭಕ್ತವಲ್ಲ, ಎಲ್ಲಾ ಜಾತಿಗಳಿಗೆ ಬೇಕಾದವರು. 15-16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾರು ಎಂದರೆ ತಪ್ಪಾಗಲಾರದು.*
👉 *ಸಾಧನೆ*
*ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ. === ಈಗಲು ಸಹಾ ಈ ಕಿಂಡಿಯನ್ನು ಕನಕನ ಕಿಂಡಿ ಎಂದು ಕರೆಯುತ್ತಾರೆ-ಕನಕ ಕಿಂಡಿ*
*ಅನೇಕರ ನಂಬಿಕೆಯಂತೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು ಹಾಡತೊಡಗಿದರಂತೆ ("ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ"). ಆಗ ಹಿಂಭಾಗದ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ. (ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿಂದುಗಡೆಯ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನ ಕಾಣಬಹುದು. ಇಲ್ಲಿ ಒಂದು ಕಿಟಕಿಯನ್ನು ನಿರ್ಮಿಸಿ ಅದನ್ನು 'ಕನಕನ ಕಿಂಡಿ' ಎಂದು ಕರೆಯಲಾಗಿದೆ).*
*ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲೀ ಇತರೆ ಕೃತಿಗಳಲ್ಲಾಗಲೀ ಮಠದ ದಾಖಲೆಗಳಲ್ಲಾಗಲೀ ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲ.*
*ಇನ್ನು ಉಡುಪಿಯ ಆ ದೇವಾಲಯವಾದರೋ ಆಗಮಾದಿಗಳಲ್ಲಿ ಹೇಳಿರುವ ವಾಸ್ತುವಿನ್ಯಾಸದನ್ವಯ ಕಟ್ಟಿಯೂ ಇಲ್ಲ. ಅಲ್ಲಿ ಬಲಿಕಲ್ಲು, ಧ್ವಜಸ್ತಂಭ, ಅಂತರಾಳ, ಅರ್ಧಮಂಟಪ, ಪ್ರದಕ್ಷಿಣಾಪಥಗಳೂ ಇಲ್ಲ. ಇನ್ನು ಪ್ರಾಣದೇವರ ಪ್ರತಿಷ್ಠಾಪನೆಯೂ ವಿಭಿನ್ನವೇ.*
*ಉಡುಪಿಯ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಕ್ರಿಸ್ತ ಶಕ ೧೨೩೮ (ಶಕವರ್ಷ ೧೧೬೦ ಹೇವಿಳಂಬಿ ಸಂವತ್ಸರ ಮಾಘ ಶುದ್ಧ ತದಿಗೆ) ನೇ ವರ್ಷದಲ್ಲಿ ಪಶ್ಚಿಮಾಭಿಮುಖಿಯಾಗಿ ಪ್ರತಿಷ್ಠೆ ಮಾಡಿದ್ದರಾಗಲೀ ಪೂರ್ವಾಭಿಮುಖವಾಗಿ ಅಲ್ಲ. ತಮಗೆ ಪಶ್ಚಿಮ ಸಮುದ್ರದಿಂದ ಲಭ್ಯವಾದ ಆ ಮೂರ್ತಿಯನ್ನು ಪಶ್ಚಿಮಕ್ಕೇ ಮುಖ ಮಾಡಿ ಪ್ರತಿಷ್ಠಾಪಿಸಿ ಪಶ್ಚಿಮ ಸಮುದ್ರಾಧೀಶ್ವರನನ್ನಾಗಿ ಕರೆದರೆನ್ನುವುದೇ ಸತ್ಯಸ್ಯ ಸತ್ಯ. ಇದಕ್ಕೆ ದಾಖಲೆಯಾಗಿ ಕನಕದಾಸರ ಸಮಕಾಲೀನರಾದ ಸುರೋತ್ತಮ ತೀರ್ಥರ ಹೇಳಿಕೆ.*
*ಅದರ ತಾತ್ಪರ್ಯ ಹೀಗಿದೆ: 'ದೇವತಾ ವಿಗ್ರಹಗಳನ್ನು ಪೂರ್ವಾಭಿಮುಖಿಯಾಗಿಯೇ ಸ್ಥಾಪಿಸಬೇಕೆಂಬ ನಿಯಮ ಏನೂ ಇಲ್ಲ. ಆದ್ದರಿಂದಲೇ ಮಧ್ವರು ಈ ಕೃಷ್ಣನ ಪ್ರತಿಮೆಯನ್ನು ಪಶ್ಚಿಮಾಭಿಮುಖಿಯಾಗಿ ಸ್ಥಾಪಿಸಿದ್ದಾರೆ". ಮಧ್ವರು ಶ್ರೀಕೃಷ್ಣಪಾದಾಂಬುಜಾರ್ಚಕರಾಗಿ ತಮ್ಮ ಮತ್ತು ತಮ್ಮ ಎಂಟು ಮಂದಿ ಶಿಷ್ಯರು ಮತ್ತು ಅವರ ಪರಂಪರೆಯವರ ನಿತ್ಯಾರ್ಚನೆಗಾಗಿ ಸ್ಥಾಪಿಸಿದ ಮೂರ್ತಿ ಇದು. ಈ ಮೂರ್ತಿ ಮತ್ತು ಅದರ ಅರ್ಚನೆ ಮಠದ ಖಾಸಗಿ ಕ್ರಿಯೆಗಳಾಗಿದ್ದು ಸಾರ್ವಜನಿಕರಿಗೆ ತೆರೆದಿಟ್ಟದ್ದಲ್ಲ.*
*ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀ ಸಂಗಮದಂತೆ. ಅವರು ಮೂರು ಮಂದಿಯೂ ಒಂದೇ ಓರಗೆಯವರು, ಒಂದೇ ಮನಸ್ಸಿನವರು, ಸಮಕಾಲೀನರು, ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿ ತ್ತು. ೧೨೦ ವರ್ಷಗಳ ಕಾಲ ಬದುಕಿದ್ದ ವಾದಿರಾಜ(೧೪೮೦-೧೬೦೦)ರಿಗೆ ತಮ್ಮ ಮಠದಲ್ಲಿ ಸರ್ವಾಂಗೀಣ ಸುಧಾರಣೆ ತರುವ ತವಕ ಇತ್ತಾದರೂ ಅಲ್ಲಿ ಭದ್ರವಾಗಿ ಬೇರೂರಿದ್ದ ಮಡಿವಂತಿಕೆಯನ್ನು ಹೋಗಲಾಡಿಸಲು ಅವರಿಂದಾಗಿರಲಿಲ್ಲ. ವಾದಿರಾಜರೊಂದಿಗೆ ತಮಗಿದ್ದ ಸ್ನೇಹವನ್ನು ದುರುಪಯೋಗ ಪಡಿಸಿಕೊಂಡು ಮಠದಲ್ಲಿ ಪ್ರವೇಶ ಪಡೆಯುವ ಧಾರ್ಷ್ಟ್ಯವೂ ಕನಕರಿಗಿರಲಿಲ್ಲ.*
*ಹೀಗೆ ಕನಕದಾಸರ ಸಾಹಿತ್ಯಕೃತಿಗಳು, ಅವರ ಬಗೆಗಿನ ಐತಿಹ್ಯಗಳು, ಅವರ ಕುರಿತು ಇತರೇ ಸಾಹಿತ್ಯಗಳಲ್ಲಿ ಅಥವಾ ಶಾಸನಗಳಲ್ಲಿನ ಮಾಹಿತಿಗಳನ್ನು ಕ್ರೋಢೀಕರಿಸಿ ಕನಕದಾಸರ ಸ್ಥೂಲ ಜೀವನ ಚಿತ್ರಣವನ್ನು ರಚಿಸಬಹುದಲ್ಲದೆ ಪರಿಪೂರ್ಣ ಜೀವನಚರಿತ್ರೆಯ ನಿರೂಪಣೆ ಸಾಧ್ಯವಿಲ್ಲದ ಮಾತು. ಆದರೆ ವಿದ್ವತ್ ನೆಲೆಯಲ್ಲಿ ವಿದ್ವತ್ಸಂಪನ್ನ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವೀತಿಯ ಸ್ಥಾನಗಳಿಸಿ, ಚಿರಸ್ಮರಣೀಯರಾಗಿದ್ದಾರೆ ಕನಕದಾಸರು.*
👉 *ಸಾಹಿತ್ಯ ರಚನೆ*
*ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:*
*ಮೋಹನತರಂಗಿಣಿ*
*ನಳಚರಿತ್ರೆ*
*ರಾಮಧಾನ್ಯ ಚರಿತೆ*
*ಹರಿಭಕ್ತಿಸಾರ*
*ನೃಸಿಂಹಸ್ತವ (ಉಪಲಬ್ದವಿಲ್ಲ)*
👉 *ಮೋಹನತರಂಗಿಣಿ*
*ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದುಸಾಂಗತ್ಯದಲ್ಲಿ ರಚಿತವಾಗಿರುವ 2700 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ.*
*ಸೋಮಸೂರಿಯ ವೀಥಿಯ ಇಕ್ಕೆಗಳಲಿ*
*ಹೇಮ ನಿರ್ಮಿತ ಸೌಧದೋಳಿ*
*ರಮಣೀಯತೆವೆತ್ತ ಕಳಸದಂಗಡಿಯಿರ್ದುಂ*
*ವಾ ಮಹಾ ದ್ವಾರಕಾಪುರದೇ*
*ಓರಂತೆ ಮರಕಾಲರು ಹಡಗಿನ ವ್ಯವ*
*ಹಾರದಿ ಗಳಿಸಿದ ಹಣವ*
*ಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕು*
*ಬೇರಂಗೆ ಕಡವ ಕೊಡುವರು*
👉 *ನಳಚರಿತ್ರೆ*
*ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನೀ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿವೆ.ಮಹಾಭಾರತದಂತಹ ರಾಷ್ಟ್ರ ಮಹಾಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳ ದಮಯಂತಿಯರ ಕಥೆ. ೧೩ನೇ ಶತಮಾನದ ನಳ ಚಂಪೂವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮ ಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರವೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರಪರಿಚಿತ. ಕಷ್ಟ ಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ ದಮಯಂತಿಯನ್ನು ಕುರಿತು ನಳ:*
*ಲಲಿತ ಹೇಮದ ತೂಗಮಂಚದ*
*ಹೊಳೆವ ಮೇಲ್ವಾಸಿನಲಿ ಮಲಗು*
*ಲಲನೆಗೀ ವಿಧಿ ಬಂದುದೇ ಹಾ! ಎನುತ ಬಿಸುಸುಯ್ದ (೫-೨)*
*ಹೀಗೆ ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ ಇದೆ. ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಪ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು. ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ.*
👉 *ರಾಮಧಾನ್ಯಚರಿತೆ*
*ರಾಮಧಾನ್ಯಚರಿತ್ರೆ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿರುವ 156 ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೇನೂ ಕೊರತೆಯಿಲ್ಲ.*
*ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡುಜಡವಲಾ, ನಿನ್ನೊಡನೆ ಮಾತೇಕೆ?*
*ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾ*
*ಎಲವೂ ನೀನೆಲ್ಲಿಹೆಯೋ ನಿನ್ನಯ ಬಳಗವದು..*
*ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪ ಹಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರ ಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು, ನವ್ಯೋತ್ತರದ ಸೂರು ಎಂದರೆ ಬಹುಶ: ತಪ್ಪಾಗಲಾರದು.*
👉 *ಹರಿಭಕ್ತಿಸಾರ*
*ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿ ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.*
👉 *ಕೀರ್ತನೆಗಳು*
*ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- 'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ. 'ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ' ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದುಕೊಳ್ಳುತ್ತಾರೆ.*
*ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಾಯರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಾಯರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.*
*'ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿ ಹಿಂಡುಗಳ' ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸರಾಯರ ಸಂಪರ್ಕದ ನಂತರ 'ಕುಲಕುಲಕುಲವೆಂದು ಹೊಡೆದಾಡದಿರಿ' ಎಂದು ಜಂಕಿಸಿ ಕೇಳುವ ಹಾಗಾದರು.*
*ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿ ತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣಬ್ರಾಹ್ಮಣೇತರ ಕಂದರ/ಕ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು. ಉಚ್ಚಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದ ಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ.*
*ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ.*
*ತೀರ್ಥವನು ಪಿಡಿದವರು ತಿರುನಾಮಧಾರಿಗಳೇ*
*ಜನ್ಮ ಸಾರ್ಥಕವಿರದವರು ಭಾಗವತರಹುದೇ*
*ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ.*
*ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.*
*ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ*
*ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ*
*ನೀ ದೇಹದೊಳಗೊ, ನಿನ್ನೊಳು ದೇಹವೂ*
*ಬಯಲು ಆಲಯದೊಳಗೊ, ಆಲಯವು ಬಯಲೊಳಗೊ*
*ಬಯಲು ಆಲಯವೆರಡು ನಯನದೊಳಗೊ*
*ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ*
*ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ*
*ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ*
*ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ*
*ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ*
*ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ*
*ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ*
*ಕುಸುಮ ಗಂಧಗಳೆರಡು ಘ್ರಾಣದೊಳಗೊ*
*ಅಸಮಭವ ಕಾಗಿನೆಲೆಯಾದಿಕೇಶವರಾಯ*
*ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ*
*ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ*
*ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ*
*ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ*
*ಒಡಲು ಹಸಿಯಲು ಅನ್ನವಿಲ್ಲದಲೇ ಇರಬಹುದು*
*ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು*
*ಮಡದಿ ಮಕ್ಕಳನೆಲ್ಲಾ ತೊಲಗಿಸಿ ಬಿಡಬಹುದು*
*ಕಡಲೊಡೆಯ ನಿನ್ನ ಅರೆಘಳಿಗೆ ಬಿಡಲಾಗದು /೧/*
*ತಾಯಿ ತಂದೆಯ ಬಿಟ್ಟು ತಪವ ಮಾಡಲೂ ಬಹುದು*
*ದಾಯಾದಿ ಬಂಧುಗಳ ಬಿಡಲೂ ಬಹುದು*
*ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು*
*ಕಾಯಜ ಪಿತ ನಿನ್ನ ಅರೆಘಳಿಗೆ ಬಿಡಲಾಗದು /೨/*
*ಪ್ರಾಣವ ಪರರು ಬೇಡಿದರೆತ್ತಿ ಕೊಡಬಹುದು*
*ಮಾನದಲಿ ಮನವ ತಗ್ಗಿಸಬಹುದು*
*ಜಾಣ ನಾಯಕನಾದ ಆದಿಕೇಶವರಾಯ*
*ಜಾಣ ಶ್ರೀಕೃಷ್ಣಾ ನಿನ್ನ ಅರೆಘಳಿಗೆ ಬಿಡಲಾಗದು /೩*
👉 *ಸ್ಮರಣೆ*
*ಕನಕದಾಸ ಜಯಂತಿ*
*ಕರ್ನಾಟಕ ಸರ್ಕಾರವು 2008ರಿಂದ ಕನಕದಾಸ ಜಯಂತಿಯನ್ನು ಆಚರಿಸುತ್ತಿದೆ. ಆ ದಿನ ಸರ್ಕಾರಿ ರಜೆ ಇರುತ್ತದೆ.*