ಪುಟಗಳು

Saturday, June 11, 2016

KSOU ವಿದ್ಯಾರ್ಥಿಗಳಿಗೊಂದು
ಶಾಕಿಂಗ್ ನ್ಯೂಸ್:~

ಪರೀಕ್ಷೆ ಪಾಸಾದರೂ ಆಯ್ಕೆ ಅವಕಾಶ ಇಲ್ಲ!!!!!

ಕೆಎಸ್‌ಓಯುನಿಂದ ಪದವಿ ಪಡೆದವರು ಅತಂತ್ರ.!!!!!

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.!!!!

*ಎಫ್‌ಡಿಎ: 22ಕ್ಕೆ ಅಂತಿಮ ಆಯ್ಕೆ ಪಟ್ಟಿ

*ಎಫ್‌ಡಿಎ: ಕೆಪಿಎಸ್‌ಸಿಗೆ ಕೆಎಸ್ಓಯು ಅಭ್ಯರ್ಥಿಗಳು ಅರ್ಹರಲ್ಲ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ (ಕೆಎಸ್‌ಓಯು) ಪದವಿ ಪಡೆದ ಅಭ್ಯರ್ಥಿಗಳು ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗೆ ಅರ್ಹರಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸಾರಿದೆ.

ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) 2012–13ನೇ ಸಾಲಿನಿಂದ ಕೆಎಸ್‌ಓಯು ಮಾನ್ಯತೆ ರದ್ದುಪಡಿಸಿರುವುದೇ ಇದಕ್ಕೆ ಕಾರಣ.

2,345 ಎಫ್‌ಡಿಎ ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್‌ಸಿ 2015ರ ಅ. 4ರಂದು ಪರೀಕ್ಷೆ ನಡೆಸಿತ್ತು. ಅರ್ಜಿ ಸಲ್ಲಿಸಿದ್ದ 8.04 ಲಕ್ಷ ಅಭ್ಯರ್ಥಿಗಳ ಪೈಕಿ 6.16 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಇದರಲ್ಲಿ ತೇರ್ಗಡೆಯಾದವರ ಪೈಕಿ 1:2 (ಒಂದು ಹುದ್ದೆಗೆ ಇಬ್ಬರು ಅಭ್ಯರ್ಥಿಗಳು) ಅನುಪಾತದಲ್ಲಿ ದಾಖಲೆಗಳ ಪರಿಶೀಲನೆಗೆ ಆಹ್ವಾನಿಸಲಾಗಿತ್ತು.

ಜೂನ್‌ 6ರಂದು ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದೆ. ಕೆಎಸ್‌ಓಯುಗೆ ಯುಜಿಸಿ ಮಾನ್ಯತೆ ಇಲ್ಲ ಎಂಬ ಕಾರಣಕ್ಕೆ 2012–13ರ ಮತ್ತು 2013–14ರ ಸಾಲಿನಲ್ಲಿ ಪದವಿ ಮುಗಿ ಸಿದ ನೂರಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ತಿರಸ್ಕರಿಸಲಾಗಿದೆ.

‘ಎಫ್‌ಡಿಎ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದ ನನಗೆ, ದಾಖಲೆಗಳ ಪರಿಶೀಲನೆಗೆ ಜೂನ್‌ 4ರಂದು ಬೆಂಗಳೂರಿನಲ್ಲಿರುವ ಉದ್ಯೋಗಸೌಧಕ್ಕೆ ಬರುವಂತೆ ಪತ್ರ ಬಂದಿತ್ತು. ಆಗ ನಾನು ಸರ್ಕಾರಿ ಕೆಲಸ ಸಿಕ್ಕೇ ಬಿಡ್ತು ಎಂಬಷ್ಟು ಸಂಭ್ರಮಿಸಿದ್ದೆ. 2013–14ನೇ ಸಾಲಿನಲ್ಲಿ ಕೆಎಸ್‌ಓಯುನಿಂದ ಕಲಾ ವಿಷಯದಲ್ಲಿ ಪದವಿ ಪಡೆದಿದ್ದೇನೆ. ಆದರೆ, ದಾಖಲೆ ಗಳ ಪರಿಶೀಲನೆ ವೇಳೆ ಕೆಎಸ್‌ಓಯುಗೆ ಮಾನ್ಯತೆ ಇಲ್ಲ ಎಂದು ನನ್ನ ಅರ್ಜಿಯನ್ನು ಅಧಿಕಾರಿಗಳು ಪ್ರತ್ಯೇಕವಾಗಿ ತೆಗೆದಿಟ್ಟರು’ ಎಂದು ಕೊರಟಗೆರೆ ರುಕ್ಸಾನಾ ‘ಪ್ರಜಾ ವಾಣಿ’ ಜೊತೆ ಅಳಲು ತೋಡಿಕೊಂಡರು.

‘ಯಾವುದಾದರೂ ವಿಶ್ವವಿದ್ಯಾಲಯ ದಿಂದ ಪದವಿ ಪಡೆದಿರಬೇಕು ಎಂದು ಅರ್ಜಿ ಸಲ್ಲಿಸುವ ವೇಳೆ ಸೂಚನೆ ನೀಡ ಲಾಗಿತ್ತು. ಹೀಗಾಗಿ ₹ 300 ಶುಲ್ಕ ಪಾವ ತಿಸಿ ಅರ್ಜಿ ಸಲ್ಲಿಸಿದ್ದೆ. ಆದರೆ, ಈಗ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ’ ಎಂದು ಬೇಸರಿಸಿದರು.

‘ನಾನು ಶೇ 59 ಅಂಕ ಪಡೆದು ಕೆಎಸ್‌ಓಯುನಲ್ಲಿ ಪದವಿ ಮುಗಿಸಿದ್ದೇನೆ. ಅಲ್ಲದೆ, ಮೈಸೂರು ವಿವಿ ಅಡಿಯಲ್ಲಿ ಬರುವ ಯಡತೊರೆ ವಿದ್ಯಾಸಂಸ್ಥೆಯಿಂದ ಶೇ 94 ಅಂಕ ಪಡೆದು ಬಿ.ಎಡ್‌ ಕೂಡಾ ಮಾಡಿದ್ದೇನೆ. ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಸಹ ತೇರ್ಗಡೆಗೊಂಡಿದ್ದೇನೆ. ಮಾನ್ಯತೆ ಇಲ್ಲದ ವಿ.ವಿಯಿಂದ ಪದವಿ ಪಡೆದಿದ್ದೇನೆ ಎಂಬ ಕಾರಣ ನೀಡಿ ನನ್ನ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಮೈಸೂರು ಜಿಲ್ಲೆ ಕೆ.ಆರ್‌. ನಗರದ ಫರ್ಹಾನಾ ಬಾನು ಹೇಳಿದರು.

‘ಬಡ ಕುಟುಂಬದಲ್ಲಿ ಹುಟ್ಟಿರುವ ನಾನು, ಕಷ್ಟಪಟ್ಟು ಪದವಿ ಮುಗಿಸಿದ್ದೆ. ಖಾಸಗಿಯಾಗಿ ಬಿ.ಎಡ್‌. ಮುಗಿಸಲು ₹ 75 ಸಾವಿರ ಖರ್ಚು ಆಗಿದೆ. ಎಫ್‌ಡಿಎ ಹುದ್ದೆ ಸಿಗುವ ಎಲ್ಲ ವಿಶ್ವಾಸ ಇತ್ತು. ಆದರೆ ಪದವಿಗೇ ಮಾನ್ಯತೆ ಇಲ್ಲ ಎಂದ ಮೇಲೆ ಬಿ.ಎಡ್‌., ಟಿಇಟಿ ತೇರ್ಗಡೆ ಮಾಡಿದ್ದರೂ ಏನು ಪ್ರಯೋಜನ?’ ಎಂದು ಕಣ್ಣೀರು ಹಾಕಿದರು.

‘ಎಫ್‌ಡಿಎ ಹುದ್ದೆಗಳ ಆಯ್ಕೆಗೆ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಈಗಾಗಲೇ ಪೂರ್ಣಗೊಂಡಿದೆ. 2012– 13ನೇ ಸಾಲಿನಲ್ಲಿ ಕೆಎಸ್‌ಓಯುನಲ್ಲಿ ಪದವಿ ಪಡೆದ ನೂರಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಈ ಸಂದರ್ಭದಲ್ಲಿ ತಿರಸ್ಕರಿಸಲಾಗಿದೆ’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಮನೋಜ್‌ಕುಮಾರ್‌ ಮೀನಾ ತಿಳಿಸಿದರು.

‘ಕೆಎಸ್‌ಓಯು ಕುಲಪತಿ ಮತ್ತು ರಿಜಿಸ್ಟ್ರಾರ್‌ ಅವರು ನನ್ನನ್ನು ಭೇಟಿಯಾಗಿ ಕೆಎಸ್‌ಓಯುನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ವಿಶ್ವ ವಿದ್ಯಾಲಯಕ್ಕೆ ಮಾನ್ಯತೆ ಇಲ್ಲ ಎಂದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾನೂನು ಪ್ರಕಾರ ಅವಕಾಶ ಇಲ್ಲ. ಎಫ್‌ಡಿಎ ಹುದ್ದೆಗಳಿಗೆ ಆಯ್ಕೆಯಾದವರ ಪಟ್ಟಿಯನ್ನು ಇದೇ 22ಕ್ಕೆ ಪ್ರಕಟಿಸಲಾಗುವುದು’ ಎಂದು ಅವರು ವಿವರಿಸಿದರು.