ಪುಟಗಳು

Tuesday, December 27, 2016

ದೇವನೂರ ಮಹದೇವ ಅವರಿಗೆ 2016ರ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ

🔵 ಬೆಂಗಳೂರು - ಕನ್ನಡ ಸಾಹಿತ್ಯ ಲೋಕದ ಮಹತ್ವದ ಲೇಖಕರಲ್ಲಿ ಒಬ್ಬರಾದ ದೇವನೂರ ಮಹದೇವ ಅವರಿಗೆ 2016ರ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಸಂದಿದೆ.

🔵 ಪ್ರಶಸ್ತಿಯನ್ನು ಇದೇ 29ರಂದು ಕುಪ್ಪಳ್ಳಿಯಲ್ಲಿ ನಡೆಯುವ ವಿಶ್ವ ಮಾನವ ದಿನಾಚರಣೆ ಕುವೆಂಪು ಜನ್ಮ ದಿನೋತ್ಸವ ಹಾಗೂ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಕಾರ್ಯ ಕ್ರಮದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಅತಿಥಿಗಳಿಂದ ಕವಿ ಶೈಲದಲ್ಲಿ ಕವಿ ನಮನ ಕಾರ್ಯಕ್ರಮ ನೆರವೇರಲಿದೆ.

🔵 11 ಗಂಟೆಗೆ ಹೇಮಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎಚ್. ಎನ್.ನಾಗಮೋಹನ್‍ದಾಸ್ ಪ್ರಧಾನ ಭಾಷಣ ಮಾಡಲಿದ್ದಾರೆ. ಶ್ರೀ ರಾಮಾಯಣದರ್ಶನಂ ವಿಶೇಷ ಆವೃತ್ತಿಯನ್ನು ಪ್ರಸಾರ ಭಾರತಿ ಅಧ್ಯಕ್ಷ ಡಾ.ಎ.ಸೂರ್ಯಪ್ರಕಾಶ್ ಬಿಡುಗಡೆ ಮಾಡಲಿದ್ದಾರೆ.

🔵 ಮಂಟಪದ ಉದ್ಘಾಟನೆಯನ್ನು ಕುವೆಂಪು ಪ್ರತಿಷ್ಠಾನದ ಸ್ಥಾಪಕ ಸದಸ್ಯರು ಹಾಗೂ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ನೆರವೇರಿಸುವರು.ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ 2017ರ ನೂತನ ಕ್ಯಾಲೆಂಡರ್‍ನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕುವೆಂಪು ವಿವಿ ಕುಲಪತಿ ಪ್ರೊ . ಜೋಗನ್ ಶಂಕರ್, ಸಾಹಿತಿ ಪ್ರೊ .ರಾಜೇಂದ್ರ ಚೆನ್ನಿ, ಕುವೆಂಪು ರಾಷ್ಟ್ರೀಯ ಪುರಸ್ಕಾರದ ದಾನಿಗಳಾದ ಎಂ.ಸಿ.ನರೇಂದ್ರ ಪಾಲ್ಗೊಳ್ಳುವರು.

🔵 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಪ್ರೊ .ಹಂ.ಪ.ನಾಗರಾಜಯ್ಯ, ತೀರ್ಥಹಳ್ಳಿ ತಾ.ಪಂ. ಅಧ್ಯಕ್ಷೆ ನವಮಣಿ, ಕುಪ್ಪಳ್ಳಿ ಜಿ.ಪಂ.ಸದಸ್ಯೆ ಕಲ್ಪನಾ ಪದ್ಮನಾಭ್ ಮತ್ತಿತರರು ಪಾಲ್ಗೊಳ್ಳುವರು.ಮಧ್ಯಾಹ್ನ 3 ರಿಂದ 4ರವರೆಗೆ ಕುವೆಂಪು ಕಾವ್ಯ ಗೀತ ಗಾಯನ ನಡೆದರೆ ಸಂಜೆ 4 ರಿಂದ ದೇವನೂರ ಮಹದೇವ ಅವರೊಂದಿಗೆ ಲೇಖಕ ಡಾ.ನಟರಾಜ್ ಹುಳಿಯಾರ್ ಅವರು ಸಂವಾದ ನಡೆಸಿಕೊಡಲಿದ್ದಾರೆ. ಇದೇ ವೇಳೆ ಕುವೆಂಪು ಗೀತೆಗಳ ನೃತ್ಯ ರೂಪಕ ಮನುಜ ಮತ, ವಿಶ್ವ ಪಥ, ನಾಟಕ ಸ್ವಪ್ನಸಿದ್ದಿ ಪ್ರದರ್ಶನಗೊಳ್ಳಲಿದೆ.

🔵 ವಿದ್ಯಾರ್ಥಿ ದೆಸೆಯಿಂದಲೇ ಜನಪರ ಆಂದೋಲನ ಗಳಲ್ಲಿ ಪಾಲ್ಗೊಂಡು ದಸಂಸದ ಸ್ಥಾಪಕರಲ್ಲೊಬ್ಬರಾದ ಬಂಡಾಯ ಸಾಹಿತಿ ದೇವನೂರ ಮಹಾದೇವ ಅವರು ಸಂಸ್ಕೃತಿ ಪಲ್ಲಟ, ರಾಜಕೀಯ ಮೇಲಾಟದ ನಡುವೆಯೂ ತಮ್ಮ ಸ್ವಂತಿಕೆ ಉಳಿಸಿಕೊಂಡ ಕೆಲವು ಕೆಲವು ಸಾಹಿತಿಗಳಲ್ಲಿ ಪ್ರಮುಖರು.ವೈಜ್ಞಾನಿಕ ದೃಷ್ಟಿಕೋನ, ವೈಚಾರಿಕ ಪ್ರಜ್ಞೆ ಮೈಗೂಡಿಸಿಕೊಂಡು ಕುವೆಂಪು ಅವರ ಆಶೋತ್ತರಗಳ ಮೂರ್ತ ರೂಪದಂತೆ ಬದುಕುತ್ತಿರುವ ದೇವನೂರರಿಗೆ ಈ ಬಾರಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಸಲ್ಲುತ್ತಿದೆ.......