Wikipedia

Search results

Tuesday, May 03, 2016

ಜೂನ್1ರೊಳಗೆ ಡಿಡಿಪಿಐ, ಬಿಇಒ ವರ್ಗಾವಣೆ ಪೂರ್ಣ 
3 May,    

ಬೆಂಗಳೂರು: ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
(PSGadyal teacher Vijayapur)

‘ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಹಾಗೂ ಪಿಯು ಉಪನ್ಯಾಸಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಹಿರಿತನದ ಮೇಲೆ ಕೌನ್ಸೆಲಿಂಗ್‌ ನಡೆಸಲಾಗುವುದು’ ಎಂದು ಅವರು ಸೋಮವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆಯಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಮತ್ತು ಉಪನಿರ್ದೇಶಕರು (ಡಿಡಿಪಿಐ) ತಮ್ಮ ಮೂಲ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಬಾರದು ಎಂದಿದೆ. ಆದ ಕಾರಣ ಜೂನ್1ರೊಳಗೆ ಇವರ ವರ್ಗಾವಣೆ ಪೂರ್ಣಗೊಳಿಸಲಾಗುವುದು’ ಎಂದರು.

ಪತಿ ಮತ್ತು ಪತ್ನಿ ಇಬ್ಬರೂ ಶಿಕ್ಷಕರಾಗಿದ್ದಲ್ಲಿ ಒಂದೇ ಕಡೆ ಅವಕಾಶ ನೀಡುವಂತಹ ಕೋರಿಕೆ ವರ್ಗಾವಣೆಗೆ ಕಾಯ್ದೆಯಲ್ಲಿ ಕಳೆದ ವರ್ಷ ಕೆಲ ತಿದ್ದುಪಡಿ ಮಾಡಲಾಗಿತ್ತು. ಆದರೆ, ಇದರಿಂದ ಕೇವಲ ಶೇ50ರಷ್ಟು ಶಿಕ್ಷಕರಿಗೆ ಸಹಕಾರಿಯಾಗಿದೆ. ಹೆಚ್ಚಿನ ಶಿಕ್ಷಕರಿಗೆ ಅನುಕೂಲವಾಗಲು ಈ ಬಾರಿ ಕೆಲ ತಿದ್ದುಪಡಿತರುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.

ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆ ಶೇ 70ರಷ್ಟು ಪೂರ್ಣಗೊಂಡಿದೆ. ಜೂನ್ 1ರೊಳಗೆ ಉಳಿದ ಶಾಲೆಗಳಿಗೂ ಸರಬರಾಜು ಮಾಡಲಾಗುವುದು. ಕಳೆದ ವರ್ಷ ಶೂ ಪೂರೈಕೆ ಮಾಡಿದವರಿಗೆ ಹಣ ನೀಡುವಲ್ಲಿ ಕೆಲವೆಡೆ ವಿಳಂಬ ಆಗಿದೆ. ಸರಬರಾಜುದಾರರ ಕೋಡಿಂಗ್‌ನಲ್ಲಿ ಗೊಂದಲ  ಇದಕ್ಕೆ ಕಾರಣ. ಒಂದು ವಾರದಲ ಸಮಸ್ಯೆ ಸರಿಪಡಿಸಲಾಗುವುದು ಎಂದರು.

‘ಪಿಯು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಗಾಗಿ ಕುಮಾರನಾಯಕ್ ವರದಿ ಅನ್ವಯ ಒಂದು ವೇತನ ಬಡ್ತಿ ನೀಡುವುದಾಗಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಜೂನ್ 1ರಿಂದ ಇದು ಅನ್ವಯ ಆಗುತ್ತದೆ. ಪ್ರತಿಭಟನೆ ನಡೆಸುತ್ತಿದ್ದ ಉಪನ್ಯಾಸಕರು ಆವೇಶದಲ್ಲಿ ವೇತನ ಬಡ್ತಿ ವಾಪಸ್‌ ನೀಡುವುದಾಗಿ ಹೇಳಿಕೆ ನೀಡಿರಬಹುದು. ಅವರ ಮನವೊಲಿಸುತ್ತೇವೆ’ ಎಂದು ಹೇಳಿದರು.

●ಸರ್ಕಾರಿ ಶಾಲೆ ಮುಚ್ಚುವುದಿಲ್ಲ:

ವಿದ್ಯಾರ್ಥಿಗಳಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಒಂದು ವೇಳೆ ವಿದ್ಯಾರ್ಥಿಗಳೇ ಇಲ್ಲದಿದ್ದರೆ ತಾತ್ಕಾಲಿಕವಾಗಿ ಅದನ್ನು ನಿಲ್ಲಿಸಿ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ನಿಯೋಜಿಸಲಾಗಿರುತ್ತದೆ. ಒಬ್ಬ ವಿದ್ಯಾರ್ಥಿ ಬಂದರೂ ಆ ಶಾಲೆಯನ್ನು ಮರಳಿ ಪ್ರಾರಂಭಿಸಲಾಗುವುದು ಎಂದರು.

●ಮೌಲ್ಯಮಾಪನ ಪೂರ್ಣ

ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಈಗಾಗಲೇ ಪೂರ್ಣ ಗೊಂಡಿದ್ದು ಅವುಗಳ ಡಿ ಕೋಡಿಂಗ್‌ ಕಾರ್ಯ ನಡೆಯುತ್ತಿದೆ ಎಂದು ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ದ್ವಿತೀಯ ಪಿಯು ಫಲಿತಾಂಶವನ್ನು ಸಿಇಟಿ ಫಲಿತಾಂಶಕ್ಕೆ ನೀಡುವುದಾಗಿ ಪುನರುಚ್ಚರಿಸಿದರು