Wikipedia

Search results

Wednesday, July 13, 2016

ಕಪ್ಪು ಕಾಗೆಯ ತಪ್ಪು ಭಾವನೆ:~
(ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ)

ಒಂದು ದಿನ ನೀರಿನಲ್ಲಿ ಈಜಾಡುತ್ತಿದ್ದ ಬಿಳಿ ಬಣ್ಣದ ಹಂಸವನ್ನು ಕಂಡು ಮರದ ಮೇಲೆ ಕುಳಿತಿದ್ದ ಕಾಗೆಗೆ ತನ್ನ ಕಪ್ಪು ಬಣ್ಣದ ಬಗ್ಗೆ ಬಹಳ ಬೇಸರವಾಯಿತು.

ಈ ಬಗ್ಗೆ ತನ್ನ ಅಳಲನ್ನು ಹಂಸದ ಬಳಿ ತೋಡಿಕೊಂಡಿತು.

ಆಗ ಹಂಸ, 'ನನಗೆ ಬಿಳಿ ಬಣ್ಣವಿದೆ ನಿಜ. ಆದರೆ ಇರುವುದು ಒಂದೇ ಬಣ್ಣ.
ಆದೇ ಗಿಳಿಯನ್ನು ನೋಡು. ಅದಕ್ಕೆ ಎರಡು ಬಣ್ಣಗಳಿವೆಯಲ್ಲ, ಅದನ್ನು ಕಂಡಾಗ ನನಗೆಷ್ಟು ಬೇಸರವಾಗುತ್ತದೆ ಗೊತ್ತಾ?' ಎಂದಿತು.

ಆಗ ಅಲ್ಲಿಗೆ ಬಂದ ಗಿಳಿ, 'ನನ್ನ ಎರಡು ಬಣ್ಣಗಳನ್ನು ಕಂಡಾಗ ನಿನಗೆ ಬೇಸರವಾಗುತ್ತದೆ.
ಆದರೆ ಆ ನವಿಲಿಗೆ ಅಷ್ಟೊಂದು ಬಣ್ಣಗಳಿವೆಯಲ್ಲ, ಅದನ್ನು ನೋಡಿದಾಗಲೆಲ್ಲ ನನಗಾಗುವ ಸಂಕಟ ಅದೆಷ್ಟು ಎಂಬುದು ನಿನಗೇನು ಗೊತ್ತು?' ಎನ್ನುತ್ತಾ ಹಾರಿ ಹೋಯಿತು.

ಅವುಗಳ ಮಾತಿನಿಂದ ಸಮಾಧಾನಗೊಳ್ಳದ ಕಾಗೆ ಸೀದಾ ನವಿಲಿನ ಬಳಿಗೆ ಹೋಯಿತು.

ತನ್ನ ಸಂಕಟವನ್ನು ತೋಡಿಕೊಳ್ಳುತ್ತ 'ಏನೇ ಹೇಳು, ನೀನು ಬಹಳ ಅದೃಷ್ಟಶಾಲಿ. ನಿನ್ನಂಥ ಅದೃಷ್ಟವಂತರು ಯಾರೂ ಇಲ್ಲ. ನೀಲಿ ಬಣ್ಣದ ತಲೆ, ಅದರ ಮೇಲೆ ತುರಾಯಿ, ಕೆಂಪು ಮಿಶ್ರಿತ ತುಸು ಹಳದಿ ಬಣ್ಣದ ರೆಕ್ಕೆ, ಬೆನ್ನಿನ ಮೇಲೆ ಹಸಿರು ಬಣ್ಣದ ಉದ್ದನೆಯ ಗರಿ, ಆ ಗರಿಗಳಲ್ಲಿರುವ ವಿವಿಧ ವರ್ಣದ ಕಣ್ಣುಗಳು... ಆಹಾ! ಒಂದೇ ಎರಡೇ... ಇವೆಲ್ಲವುಗಳಿಂದ ಕೂಡಿ ಅದೆಷ್ಟು ಸುಂದರವಾಗಿ ಕಾಣುವೆ. ಅದಕ್ಕೇ ಅಲ್ಲವೇ ಇಲ್ಲಿಗೆ ಬರುವ ಪ್ರವಾಸಿಗರಿಗೆಲ್ಲ ನೀನು ಪ್ರಮುಖ ಆಕರ್ಷಣೆಯಾಗಿರುವುದು. ಆದರೆ ನನಗೆ ಆ ಅದೃಷ್ಟದಲ್ಲಿ ಒಂದಂಶವೂ ಇಲ್ಲ. ಜನ ನನ್ನನ್ನು ಕೊಳಕು, ಮೈಲಿಗೆ, ಅಪಶಕುನ, ಕಪ್ಪುಬಣ್ಣವೆಂಬ ತಿರಸ್ಕಾರದಿಂದ ನೊಡುತ್ತಾರೆ. ನನ್ನ ರೂಪದ ಬಗ್ಗೆ ನನಗೇ ಅಸಹ್ಯವಾಗುತ್ತಿದೆ. ಈ ಜೀವನವೇ ಸಾಕೆನಿಸುತ್ತಿದೆ' ಎಂದಿತು.

ಆಗ ನವಿಲು ಕಾಗೆಯನ್ನು ಸಮಾಧಾನ ಪಡಿಸುತ್ತಾ, 'ನೀನು ತಪ್ಪು ತಿಳಿದುಕೊಂಡಿರುವೆ. ನೀನಂದುಕೊಂಡ ಹಾಗೆ ನಾನು ಸುಂದರವಾಗಿದ್ದೇನೆ ನಿಜ. ಆದರೆ ಈ ನನ್ನ ಸೌಂದರ್ಯವೇ ನನಗೆ ಮುಳುವಾಗಿದೆ. ನನ್ನ ಆಕರ್ಷಣೆಯೇ ನನ್ನನ್ನು ಇಲ್ಲಿ ಬಂಧಿದಿಯಾಗಿರುವಂತೆ ಮಾಡಿದೆ. ಇಲ್ಲಿ ನನಗೆ ಯಾವ ಸ್ವಾತಂತ್ರ್ಯವಿದೆ ಹೇಳು?
ಕಾಡಿನಲ್ಲಿ ನೆಮ್ಮದಿಯಾಗಿರೋಣ ಎಂದರೆ ಮಾಂಸಕ್ಕಾಗಿ, ಮದ್ದಿಗಾಗಿ, ಬಣ್ಣಬಣ್ಣದ ಬೀಸಣಿಕೆಗಳ ತಯಾರಿಕೆಗಾಗಿ ನಮ್ಮನ್ನು ಬೇಟೆಯಾಡುವ ಕಳ್ಳಬೇಟೆಗಾರರ ಭಯ. ಎಲ್ಲೂ ನೆಮ್ಮದಿಯಿಲ್ಲದ ಜೀವನ ನಮ್ಮದು. ನನಗಿಂತ ನೀನೇ ವಾಸಿ. ನಿನ್ನ ತಂಟೆಗೆ ಯಾರೂ ಬರುವುದಿಲ್ಲ. ನಿನ್ನ ಸ್ವಾತಂತ್ರ್ಯಕ್ಕೆ ಯಾವ ಧಕ್ಕೆಯೂ ಇಲ್ಲ. ಎಲ್ಲಿ ಬೇಕೆಂದರಲ್ಲಿ ಸ್ವಚ್ಛಂದವಾಗಿ ಹಾರಾಡುವ ನಿನ್ನನ್ನು ಕಂಡಾಗ ನವಿಲಾಗಿ ಹುಟ್ಟುವ ಬದಲು ನಾನೂ ಕಾಗೆಯಾಗಬಾರದಿತ್ತೆ? ಎಂದುಕೊಳ್ಳುತ್ತೇನೆ.
ಎಲ್ಲರಿಗೂ ಅವರವರದೇ ಆದ ಕೊರತೆಗಳೂ ಇರುತ್ತವೆ,
ವಿಶೇಷತೆಗಳೂ ಇರುತ್ತವೆ.
ಯಾರೂ ಪರಿಪೂರ್ಣರಲ್ಲ' ಎಂದಿತು.

ನವಿಲಿನ ಮಾತನ್ನು ಕೇಳಿದ ಕಾಗೆಗೆ ಜ್ಞಾನೋದಯವಾಯಿತು.

ಅಯ್ಯೋ, ಇಷ್ಟು ದಿನ ಬೇರೆಯವರಿಗೆ ಹೋಲಿಸಿಕೊಂಡು ಅವರ ಹಾಗೆ ನಾನಿಲ್ಲವಲ್ಲ ಎಂದುಕೊಂಡು ಅನವಶ್ಯಕವಾಗಿ ತಲೆಕೆಡಿಸಿಕೊಂಡೆ. ಬೆಳಗಾಯಿತೆಂದು ಜನರನ್ನು ಎಚ್ಚರಿಸುವಲ್ಲಿ, ಪರಿಸರವನ್ನು ಸ್ಚಚ್ಛಗೊಳಿಸುವುದರಲ್ಲಿ, ಪಿಂಡಪ್ರದಾನ ಕಾರ್ಯದಲ್ಲಿ ನನ್ನ ಪಾತ್ರವೂ ಇದೆ ಎಂಬುದನ್ನು ಮರೆತು ನನ್ನಲ್ಲಿರುವ ಕೊರತೆಯನ್ನೇ ದೊಡ್ಡದು ಮಾಡಿಕೊಂಡು ಸಂಕಟ ಅನುಭವಿಸಿದೆ. ಇನ್ನೆಂದೂ ಈ ರೀತಿ ಯೋಚಿಸಬಾರದು.

ಸಂತೋಷವನ್ನು ಕಿತ್ತುಕೊಳ್ಳುವ ಕೊರತೆಗಳನ್ನು ಪಕ್ಕಕ್ಕಿಟ್ಟು ನಮ್ಮಲ್ಲಿರುವ ವಿಶೇಷತೆಗಳನ್ನು ಗುರುತಿಸಿಕೊಂಡು ಇರುವುದರಲ್ಲೇ ಸಂತೋಷ ಪಡಬೇಕು. ನೆಮ್ಮದಿಯನ್ನು ಕಾಣಬೇಕು ಎಂದುಕೊಂಡು ಅಲ್ಲಿಂದ ಹಾರಿ ಹೋಯಿತು.

ಎಸ್.ಆರ್.ವಲ್ಡ್೯ ನ ಕೊನೆಯ ಮಾತು:
ನೀವು ಏನೆಂಬುದು ನಿಮ್ಮನ್ನು ಬಿಟ್ಟರೆ ಉಳಿದವರಿಗೆ ಗೊತ್ತಿರೋದಿಲ್ಲ
ನಿಮಗೆ ಮಾತ್ರ ಗೊತ್ತಿರೋ ನಿಮ್ಮ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿ,
ನಾವು ಈಗ ಹೇಗಿದ್ದೇವೆಯೋ ಅದರಲ್ಲಿಯೇ ಸಂತೃಪ್ತರಾಗುತ್ತಾ ಅವಶ್ಯವಿದ್ದಲ್ಲಿ ಉನ್ನತೀಕರಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ.

ನಾವು ನಮ್ಮನ್ನು ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳದೇ, ನಮ್ಮನ್ನು ನಮ್ಮೊಂದಿಗೆ ಮಾತ್ರ ಹೋಲಿಸಿಕೊಳ್ಳೋಣ.
ನಿನ್ನೆ ಹೇಗಿದ್ದೆ?
ಇಂದು ಹೇಗಾಗಿದ್ದೀನಿ?
ನಾಳೆ ಹೇಗಾಗಬೇಕು?
ಅಂತ ಯೋಚನೆ ಮಾಡಿ.

ಶುಭದಿನದ ಶುಭೋದಯ ಶುಭಕರವಾಗಿರಲಿ.

ವಿಷವಾಗುವ ವಿಷಯ:~
(ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ)

ಒಂದು ದಿನ ಸಾಕ್ರಟಿಸ್
ಏಕಾಂಗಿಯಾಗಿ ತಮ್ಮ ಮನೆ ಅಂಗಳದಲ್ಲಿ ನಡೆದಾಡುತ್ತಿದ್ದಾಗ ಅವನಿಗೆ ಸ್ನೇಹಿತನೊಬ್ಬ,
‘ಸಾಕ್ರಟಿಸ್, ನಿಮ್ಮ ಶಿಷ್ಯನೊಬ್ಬನ ಬಗ್ಗೆ ನಾನೊಂದು ವಿಷಯ ಕೇಳಿದೆ,
ಆ ಸಂಗತಿ ನಿನಗೆ ಗೊತ್ತಿದೆಯಾ?’ ಎಂದು ಕೇಳಿದ.

ಅದಕ್ಕೆ ಸಾಕ್ರಟಿಸ್,
"ಒಂದು ನಿಮಿಷ ತಾಳು,
ನೀನು ಆ ವಿಷಯ ಹೇಳುವ ಮೊದಲು ನಿನಗೊಂದು ಮೂರು ಹಂತದ ಪರೀಕ್ಷೆಯೊಡ್ಡುತ್ತೇನೆ.
ನನ್ನ ಶಿಷ್ಯನ ಬಗ್ಗೆ ಹೇಳುವ ಮೊದಲು ಈ ಪರೀಕ್ಷೆಗೆ ನಿನ್ನನ್ನು ಒಳಪಡಿಸುವೆ" ಎಂದ.

ಅದಕ್ಕೆ ಆತ ಒಪ್ಪಿಕೊಂಡ.

‘ಮೊದಲ ಹಂತ ಅಂದ್ರೆ ಸತ್ಯ.
ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳುವ ಸಂಗತಿ ಸತ್ಯ ಎಂಬುದು ನಿನಗೆ ಮನವರಿಕೆಯಾಗಿರಬೇಕು, ಆಯಿತಾ?’ ಎಂದ ಸಾಕ್ರಟೀಸ್.

ಅದಕ್ಕೆ ಸ್ನೇಹಿತ
‘ಅದು ಸತ್ಯ ಹೌದೋ, ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ.
ನನಗೆ ಯಾರೋ ಹೇಳಿದರು.
ನಾನು ಅದನ್ನು ಕೇಳಿದೆ ಅಷ್ಟೆ’ ಎಂದ.

ಅವನ ಮಾತಿಗೆ ಸಾಕ್ರಟಿಸ್,
‘ಹೌದಾ? ಆದರೆ ನೀನು ಹೇಳೋದು ಸತ್ಯವೋ, ಸುಳ್ಳೋ ಎಂಬುದು ನಿನಗೆ ಗೊತ್ತಿಲ್ಲ ಅಂತಾಯಿತು. ಪರವಾಗಿಲ್ಲ ಬಿಡು.

ಹಾಗಾದರೆ ಈಗ ಎರಡನೆ ಹಂತದ ಪರೀಕ್ಷೆ.
ಇದು goodness ಪರೀಕ್ಷೆ.

ಅಂದರೆ ನನ್ನ ಶಿಷ್ಯನ ಬಗ್ಗೆ ನೀನು ಹೇಳಲಿರುವ ಮಾತು ಒಳ್ಳೆಯದೋ, ಕೆಟ್ಟದ್ದೋ?’ ಎಂದು ಕೇಳಿದ.

ಅದಕ್ಕೆ ಸ್ನೇಹಿತ,
‘ಇಲ್ಲ…ಇಲ್ಲ… ಅದು ಒಳ್ಳೆಯ ವಿಷಯವಲ್ಲ’ ಎಂದ.

‘ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿ ಕೆಟ್ಟದ್ದು ಅಂತಾಯಿತು.
ಅಂದರೆ ಅದು ಸತ್ಯ ಸಂಗತಿ ಹೌದೋ ಅಲ್ಲವೋ ಎಂಬುದು ನಿನಗೆ ಗೊತ್ತಿರದಿದ್ದರೂ ಪರವಾಗಿಲ್ಲ.
ನೀನು ಅವನ ಬಗ್ಗೆ ಕೆಟ್ಟದನ್ನು ಹೇಳಬೇಕೆಂದು ಬಯಸಿದ್ದೀಯಾ ಅಂತಾಯಿತು’ ಎಂದ ಸಾಕ್ರಟಿಸ್.

ಈ ಮಾತನ್ನು ಕೇಳಿ ಸ್ನೇಹಿತನ ಮುಖ ಬಿಳುಚಿಕೊಂಡಿತು. ಒಂದು ಕ್ಷಣ ಆತ ತಬ್ಬಿಬ್ಬಾದ.

ಸಾಕ್ರಟಿಸ್ ಮುಂದುವರಿಸಿದ
‘ನನ್ನ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಿನಗೆ ಇನ್ನೂ ಒಂದು ಅವಕಾಶವಿದೆ. ಮೂರನೆ ಹಂತದ ಪರೀಕ್ಷೆಯನ್ನು ಒಡ್ಡುತ್ತೇನೆ. ಈ ಹಂತಕ್ಕೆ ಉಪಯುಕ್ತತೆ ಹಂತ ಎಂದು ಹೆಸರು.
ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿಯಿಂದ ನನಗಾಗಲಿ, ಸಮಾಜಕ್ಕಾಗಲಿ ಅಥವಾ ನಿನಗಾಗಲಿ ಯಾವುದಾದರೂ ರೀತಿಯಿಂದ ಪ್ರಯೋಜನವಾಗುತ್ತದೆ, ಉಪಯೋಗವಾಗುತ್ತದೆ ಎಂದು ನಿನಗೆ ಅನಿಸುತ್ತಿದೆಯಾ?’

ಅದಕ್ಕೆ ಸ್ನೇಹಿತ,
ಇಲ್ಲ ಅದರಿಂದ ಯಾರಿಗೂ ಲಾಭವಾಗುತ್ತದೆಂದು ನನಗೆ ಅನಿಸುತ್ತಿಲ್ಲ’ ಎಂದ.

ಆ ಸ್ನೇಹಿತನನ್ನು ಹತ್ತಿರಕ್ಕೆ ಕರೆದ ಸಾಕ್ರಟಿಸ್ ನುಡಿದ-‘ಅಯ್ಯಾ, ನೀನು ಹೇಳಲಿರುವ ಸಂಗತಿ ಸತ್ಯವೋ, ಸುಳ್ಳೋ ಎಂಬುದು ಗೊತ್ತಿಲ್ಲ. ಅದರಿಂದ ಯಾವ ಪುರುಷಾರ್ಥ ಸಾಧನೆಯಾಗುತ್ತದೆಂಬುದೂ ಗೊತ್ತಿಲ್ಲ. ಅದರಿಂದ ನನಗಾಗಲಿ, ನಿನಗಾಗಲಿ, ಸಮಾಜಕ್ಕಾಗಲಿ ಯಾವ ಪ್ರಯೋಜನವೂ ಇಲ್ಲ. ಹೀಗಿರುವಾಗ ಅಂಥ ವಿಷಯವನ್ನು ನನಗೇಕೆ ಹೇಳುತ್ತೀಯಾ?
ನಿನ್ನ ಬಾಯಿ ಚಪಲ ತೀರಿಸಿಕೊಳ್ಳಲು ಬೇರೆಯವರ ಬಗ್ಗೆ ಇಲ್ಲಸಲ್ಲದ ಸಂಗತಿ ಹೇಳ್ತೀಯಲ್ಲ, ನಿನಗೆ ನಾಚಿಕೆ ಆಗೊಲ್ಲವಾ? ನಾಲ್ಕು ಜನರಿಗೆ ಉಪಯೋಗವಾಗುವ ಕೆಲಸವಿದ್ದರೆ ಮಾಡು, ಇಲ್ಲದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡು"
ಎಂದು ಹೇಳಿದರು.

ಈ ದೃಷ್ಟಾಂತದ ಮೂಲಕ ಎಸ್.ಆರ್.ವಲ್ಡ್೯  ಹೇಳಬಯಸುವುದೇನೆಂದರೆ
ಸ್ನೇಹಿತರೆ,
ಪ್ರತಿ ನಿತ್ಯ ಸಾಕ್ರೆಟಿಸ್‌ನಿಗೆ ಅವನ ಸ್ನೇಹಿತ ಹೇಳಲು ಬಂದಂತೆ ನಮಗೆಲ್ಲರಿಗೂ ನಮ್ಮ ಸ್ನೇಹಿತರು ಹಲವಾರು ವಿಷವಾಗುವ ವಿಷಯವನ್ನು ತರುತ್ತಿರುತ್ತಾರೆ. ಅದು ಎಷ್ಟು ಅವಶ್ಯಕ ಎಂಬುದನ್ನು ಅರಿತು ಆಲಿಸಬೇಕು.
ಹಾಗೆಯೇ ನೀವು ಇನ್ನೊಬ್ಬರಿಗೆ ಮುಟ್ಟಿಸಬೇಕೆನ್ನುವ 'ವಿಷ'ಯ 'ವಿಷ'ವಾಗದಂತಿರಲಿ.

ಶುಭದಿನದ ಶುಭೋದಯದ ಶುಭಾಶಯ.