Wikipedia

Search results

Wednesday, December 20, 2017

ಗುಡ್ ನ್ಯೂಸ್! ಗ್ರಾಚ್ಯುಟಿ ಮಿತಿ 20 ಲಕ್ಷ, ತಾಯ್ತನದ ರಜಾ 26 ವಾರ

ಉದ್ಯೋಗಿಗಳ ಗ್ರಾಚ್ಯುಟಿ ಮೊತ್ತದ ಮೇಲಿದ್ದ ಮಿತಿಯನ್ನು ಸರಕಾರ 10 ಲಕ್ಷದಿಂದ 20 ಲಕ್ಷ ರುಪಾಯಿಗೆ ಏರಿಕೆ ಮಾಡಿದೆ. ದ ಪೇಮಂಟ್ ಆಫ್ ಗ್ರಾಚ್ಯುಟಿ ಆಕ್ಟ್ (ತಿದ್ದುಪಡಿ) ಮಸೂದೆ 2017 ಅನ್ನು ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವರ್ ಸದನದಲ್ಲಿ ಮಂಡಿಸಿದರು.ವಿರೋಧ ಪಕ್ಷಗಳು ಈ ವೇಳೆ ಘೋಷಣೆ ಕೂಗಿದವು. ಪ್ರತಿಯಾಗಿ ಬಿಜೆಪಿಯವರೂ ಘೋಷಣೆ ಹಾಕಿದರು. ಪೇಮಂಟ್ ಆಫ್ ಗ್ರಾಚ್ಯುಟಿ ಆಕ್ಟ್ 1972ರ ಅನ್ವಯ ಕಾರ್ಖಾನೆ, ಗಣಿಗಾರಿಕೆ, ಪ್ಲಾಂಟೇಷನ್, ಬಂದರು, ರೈಲ್ವೆ ಕಂಪನಿ, ಮಳಿಗೆ ಅಥವಾ ಇನ್ಯಾವುದೇ ಸಂಸ್ಥೆಗಳಿಗೆ ಇದು ಅನ್ವಯ ಆಗುತ್ತದೆ.ಅಂಥಲ್ಲಿ ಐದು ವರ್ಷ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಿದ್ದರೆ ಗ್ರಾಚ್ಯುಟಿ ನೀಡಬೇಕು. ಅಂದಹಾಗೆ ಈ ಗ್ರಾಚ್ಯುಟಿ ಮೊತ್ತವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?ಅದಕ್ಕೊಂದು ಸೂತ್ರವಿದೆ. ಆ ಉದ್ಯೋಗಿ ಒಟ್ಟಾರೆಯಾಗಿ ಅಲ್ಲಿ ಎಷ್ಟು ವರ್ಷ ಕಾರ್ಯ ನಿರ್ವಹಿಸಿದರು ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ವರ್ಷಕ್ಕೆ ಹದಿನೈದು ದಿನದಂತೆ ಸಂಬಳ ಲೆಕ್ಕ ಹಾಕಿ, ಅವರು ಎಷ್ಟು ವರ್ಷ ಕೆಲಸ ನಿರ್ವಹಿಸಿರುತ್ತಾರೋ ಅಷ್ಟು ವರ್ಷವನ್ನು ಗುಣಿಸಲಾಗುತ್ತದೆ. ಬಂದ ಮೊತ್ತವೇ ಗ್ರಾಚ್ಯುಟಿ.2010ರಲ್ಲಿ ಗ್ರಾಚ್ಯುಟಿ ಮೊತ್ತಕ್ಕೆ ಗರಿಷ್ಠ 10 ಲಕ್ಷ ಎಂದು ಮಿತಿ ಹಾಕಲಾಯಿತು. ಆ ನಂತರ ಏರುತ್ತಿರುವ ಹಣದುಬ್ಬರ, ವೇತನ ಮತ್ತಿತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಖಾಸಗಿ ಹಾಗೂ ಸರಕಾರಿ ವಲಯಗಳಲ್ಲೇ ಗ್ರಾಚ್ಯುಟಿ ಮಿತಿಯಲ್ಲೇ ಏರಿಕೆ ಮಾಡಲಾಗುತ್ತಿದೆ. ಕಾಯ್ದೆಗೆ ತಿದ್ದುಪಡಿ ತರುವ ಬದಲು ಅಧಿಸೂಚನೆ ಹೊರಡಿಸಿದರೆ, ಆಯಾ ಸಮಯಕ್ಕೆ ತಕ್ಕಂತೆ ಆ ಮಿತಿಯನ್ನು ಮುಂದಿನ ವೇತನ ಆಯೋಗಗಳು ಶಿಫಾರಸು ಮಾಡಬಹುದು ಎಂದು ಕೂಡ ಹೇಳಲಾಗಿದೆ.ತಾಯ್ತನದ ವೇತನಸಹಿತ ರಜೆಯನ್ನು ಹೆಚ್ಚಿಸುವ ಪ್ರಸ್ತಾವವನ್ನು ಕೂಡ ಸರಕಾರ ಮುಂದಿಟ್ಟಿದೆ. ಮಾತೃತ್ವ ಅನುಕೂಲ (ತಿದ್ದುಪಡಿ) ಕಾಯ್ದೆ, 2017ರ ಮೂಲಕ ತಾಯ್ತನದ ವೇತನ ಸಹಿತ ರಜಾ 26 ವಾರಕ್ಕೆ ಹೆಚ್ಚಿಸುವ ಉದ್ದೇಶವಿದೆ. ಈ ವರೆಗೆ ಹನ್ನೆರಡು ವಾರದವರೆಗೆ ಇದ್ದ ಮಾತೃತ್ವ ರಜಾವನ್ನು ಇಪ್ಪತ್ತಾರು ವಾರಗಳಿಗೆ ವಿಸ್ತರಿಸುವುದನ್ನು ಸೇರಿಸಲಾಗಿದೆ ಎಂದು ಹೇಳಿಕೆಯಲ್ಲಿದೆ.

Friday, December 15, 2017

ನೃಪತುಂಗ ಪ್ರಶಸ್ತಿಗೆ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಆಯ್ಕೆ

ಬೆಂಗಳೂರು, ಡಿಸೆಂಬರ್ 14 : ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರು 2018ನೇ ಸಾಲಿನ 'ನೃಪತುಂಗ ಸಾಹಿತ್ಯ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕೊಡಮಾಡುವ ಪ್ರಶಸ್ತಿ ಇದಾಗಿದೆ. ಬಿಎಂಟಿಸಿಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದೂವರೆ ಕೋಟಿ ರೂ ಗಳ ದತ್ತಿನಿಧಿಯನ್ನು ಸ್ಥಾಪಿಸಿ ಅದರಿಂದ ಬರುವ ಬಡ್ಡಿ ಹಣದಲ್ಲಿ ಏಳು ಲಕ್ಷ ಎರೂ. ಮೊತ್ತದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಪ್ರಶಸ್ತಿ ಸ್ಥಾಪಿಸಿದೆ.

ಕನ್ನಡ ಸಾರಸ್ವತ ಪ್ರಪಂಚದ ಶ್ರೇಷ್ಠ ಲೇಖಕರಿಗೆ ಈ ಪ್ರಶಸ್ತಿಯನ್ನು 2008 ರಿಂದ ನೀಡುತ್ತಾ ಬಂದಿದೆ. ಕನ್ನಡ ಸಾಹಿತ್ಯ ಪ್ರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಆಯ್ಕೆ ಸಮಿತಿಯು ಎಸ್. ಎಲ್. ಭೈರಪ್ಪ ಅವರನ್ನು ಆಯ್ಕೆ ಮಾಡಿದೆ.

ಕವಿ ಬಿ.ಆರ್. ಲಕ್ಮಣರಾವ್, ವಿದ್ವಾಂಸರಾದ ವೀರಣ್ಣ ರಾಜೂರ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಡಾ. ಎ.ಎನ್. ಪ್ರಕಾಶ್ ಗೌಡ, ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿ ವಿಜಯಕುಮಾರ್ ಕ.ರಾ.ರ.ಸಾ.ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷರಾದ ವ.ಚ. ಚನ್ನೇಗೌಡ ಅವರುಗಳಿದ್ದ ಸಮಿತಿ ಆಯ್ಕೆ ಮಾಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 'ಮಯ್ಯೂರ ವರ್ಮ ಸಾಹಿತ್ಯ ಪ್ರಶಸ್ತಿ': ನೃಪತುಂಗ ಸಾಹಿತ್ಯ ಪ್ರಶಸ್ತಿ ಜತೆಗೆ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿರುವ 45 ವರ್ಷದೊಳಗಿನ ಸಾಹಿತಿಗಳಿಗೆ ಪ್ರಶಸ್ತಿ ನೀಡಲು ಮಯ್ಯೂರವರ್ಮ ಸಾಹಿತ್ಯ ಪ್ರಶಸ್ತಿ ನೀಡಲಾಗುತ್ತಿದೆ.

ಆಯ್ಕೆ ಸಮಿತಿಯು ರಾಮಲಿಂಗೇಶ್ವರ, ಡಾ. ಸಿ. ನಂದಿನಿ, ಶಾಂತಿ ಕೆ.ಅಪ್ಪಣ್ಣ ಇವರನ್ನು ಸರ್ವಾನುಮತದಿಂದ 2018 ನೇ ಸಾಲಿನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ತಿಳಿಸಿದ್ದಾರೆ.