Wikipedia

Search results

Wednesday, April 26, 2017

ವಿದ್ಯಾರ್ಥಿಗಳಿಗೆ ಆನ್ಲೈನ್ ಹಾಜರಾತಿ: ಶಿಕ್ಷಕರಿಗೆ ಬಯೋಮೆಟ್ರಿಕ್

ಬೆಂಗಳೂರು: ರಾಜ್ಯಾದ್ಯಂತ 8,000 ಸರಕಾರಿ ಪ್ರಾಥಮಿಕ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಡಿಜಿಟಲ್ ಆಗಲಿವೆ. ವಿದ್ಯಾರ್ಥಿಗಳ ಹಾಜರಾತಿಗೆ ಆನ್ಲೈನ್ ಸ್ಪರ್ಶ ಸಿಗಲಿದೆ. ಹಾಗೆೆಯೇ, ಶಿಕ್ಷಕರೂ ಬಯೋಮೆಟ್ರಿಕ್ ಹಾಜರಾತಿಗೆ ಒಳಪಡುತ್ತಾರೆ. ಶಿಕ್ಷಕರ ಬಯೋಮೆಟ್ರಿಕ್ ಮತ್ತು ವಿದ್ಯಾರ್ಥಿಗಳ ಆನ್ಲೈನ್ ಹಾಜರಾತಿಗೆ  ಸರ್ವಶಿಕ್ಷಾ ಅಭಿಯಾನ ದಿಂದ "ಸ್ಟೂಡೆಂಟ್ ಟ್ರ್ಯಾಕಿಂಗ್ ಸಿಸ್ಟಮ್' ಅಭಿವೃದ್ಧಿ ಪಡಿಸಲಾಗಿದೆ. ಈ ಯೋಜನೆಯಡಿ ಶಿಕ್ಷಕರಿಗೆ ಬಹೂಪಯೋಗಿ ಟ್ಯಾಬ್ ನೀಡಲಾಗುತ್ತದೆ. ಈ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಸರಕಾರದಿಂದ ತಾತ್ವಿಕ ಅನುಮೋದನೆ ದೊರೆತಿದೆ.

2017-18ನೇ ಸಾಲಿನಲ್ಲಿ 170ಕ್ಕಿಂತ ಅಧಿಕ ಮಕ್ಕಳಿರುವ ಸರಕಾರಿ ಶಾಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ 'ಹಸಿರು ಪ್ರಶಸ್ತಿ'

ಪ್ರತಿಷ್ಠಿತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಕೌನ್ಸಿಲ್ ವತಿಯಿಂದ 'ಹಸಿರು ವಿಮಾನ ನಿಲ್ದಾಣ' ಎಂಬ ಹೆಗ್ಗಳಿಕೆ ಪಾತ್ರವಾಗಿದೆ.ಇತ್ತೀಚಿನ ದಿನಗಳಲ್ಲಿ ವಿಮಾನ ನಿಲ್ದಾಣವನ್ನು ಪರಿಸರ ಸ್ನೇಹಿಯನ್ನಾಗಿಸುವ ಉದ್ದೇಶದಿಂದ ಲೆವೆಲ್ 3 ಪ್ಲಸ್ ಇಂಗಾಲತಟಸ್ಥತೆ ನಿಯಮವನ್ನು ಅನುಸರಿಸಿತ್ತು.ಲೆವೆಲ್ 3 ಪ್ಲಸ್ ಇಂಗಾಲ ತಟಸ್ಥತೆಯು ಅಂತಾರಾಷ್ಟ್ರೀಯ ಏರ್ಪೋರ್ಟ್ಸ್ ಕೌನ್ಸಿಲ್ ನಿಂದ ಇಂಗಾಲ ತಡೆಗೆ ನಿಗದಿಪಡಿಸಲಾಗಿರುವ ಅತ್ಯುನ್ನತ ಮಟ್ಟದ ನಿಯಮಾವಳಿಗಳು.ಈ ನಿಯಮಾವಳಿಗಳನ್ನು ಅಳವಡಿಸಿಕೊಂಡ ಬೆಂಗಳೂರು ವಿಮಾನ ನಿಲ್ದಾಣ, ತನ್ನಲ್ಲಿ ಶೇ. 57ರಷ್ಟು ಇಂಗಾಲ ಹೊರಹೊಮ್ಮುವಿಕೆಯನ್ನು ಕಡಿಮೆ ಮಾಡಿಕೊಂಡಿತ್ತು.ಈ ಸಾಧನೆಗಾಗಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಕೌನ್ಸಿಲ್ ವತಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹಸಿರು ಪ್ರಶಸ್ತಿ ಪತ್ರ (ಗ್ರೀನ್ ಅವಾರ್ಡ್) ನೀಡಿ ಗೌರವಿಸಿದೆ.

ಏ. 30 ರಂದು ಅಬಕಾರಿ ಉಪ ನಿರೀಕ್ಷಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ

    ಕರ್ನಾಟಕ ರಾಜ್ಯದ ಅಬಕಾರಿ ಇಲಾಖೆಯಲ್ಲಿನ 177 ಅಬಕಾರಿ ಉಪನಿರೀಕ್ಷಕರ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ಏ. 30 ರಂದು ಏರ್ಪಡಿಸಿರುವ ಸ್ಪರ್ಧಾತ್ಮಕ ಪರೀಕ್ಷೆ ಕೊಪ್ಪಳ ಜಿಲ್ಲೆಯ 09 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ, ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಸೂಚನೆ ನೀಡಿದರು.

  ಅಬಕಾರಿ ಉಪನಿರೀಕ್ಷಕರ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

   ಕರ್ನಾಟಕ ಲೋಕಸೇವಾ ಆಯೋಗವು ಅಬಕಾರಿ ಉಪನಿರೀಕ್ಷಕರ ಹುದ್ದೆ ಭರ್ತಿಗಾಗಿ ಏ. 30 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಜಿಲ್ಲೆಯ 09 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.  ಜಿಲ್ಲೆಯ 3000 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯದಂತೆ, ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಬೇಕು.  ಈ ನಿಟ್ಟಿನಲ್ಲಿ ಪ್ರಶ್ನೆಪತ್ರಿಕೆ ಖಜಾನೆ ಇಲಾಖೆಗೆ ಠೇವಣಿಯಾಗುವುದರಿಂದ ಮೊದಲುಗೊಂಡು, ವಿತರಣೆಯಾಗುವವರೆಗೂ ಎಲ್ಲವನ್ನೂ ವಿಡಿಯೋ ಚಿತ್ರೀಕರಣ ಆಗಬೇಕು.  ಇದಕ್ಕಾಗಿ ಮೂವರು ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದ್ದು, ಇವರು ಇದರ ಮೇಲ್ವಿಚಾರಣೆ ನಡೆಸಬೇಕು.  ಖಜಾನೆಯಿಂದ   ಪ್ರಶ್ನೆಪತ್ರಿಕೆಗಳನ್ನು ತೆಗೆದುಕೊಂಡು ನಿಗದಿತ ಅವಧಿಯೊಳಗೆ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಹೊಣೆ ಆಯಾ ಮಾರ್ಗಾಧಿಕಾರಿಗಳಿಗೆ ವಹಿಸಲಾಗಿದ್ದು, ವಿಳಂಬಕ್ಕೆ ಅವಕಾಶವಿಲ್ಲದಂತೆ ಪ್ರಶ್ನೆಪತ್ರಿಕೆಯನ್ನು ನಿಗದಿತ ಅವಧಿಯೊಳಗೆ ತಲುಪಿಸಬೇಕು.  ಪರೀಕ್ಷೆ ಪ್ರಾರಂಭದ ನಂತರ ಪರೀಕ್ಷಾ ಕೊಠಡಿಯೊಳಗೆ ಮಾಧ್ಯಮದವರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. 

ಪರೀಕ್ಷಾ ಕೇಂದ್ರದೊಳಗೆ ಯಾವುದೇ ಬಗೆಯ ಮೊಬೈಲ್ ಫೋನ್, ಕ್ಯಾಲ್ಕುಲೇಟರ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.  ಅಲ್ಲದೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಯಾವುದೇ ಬಗೆಯ ಬ್ಯಾಗ್, ಪುಸ್ತಕ ತರುವಂತಿಲ್ಲ.  ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ, ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಅಲ್ಲದೆ ಪರೀಕ್ಷಾ ದಿನದಂದು ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು.

ಪ್ರತಿ ಕೇಂದ್ರಕ್ಕೆ ಕಡ್ಡಾಯವಾಗಿ ಒಬ್ಬರು ಮಹಿಳಾ ಪೊಲೀಸ್ ಪೇದೆಯನ್ನು ನಿಯೋಜಿಸಬೇಕು.  ಕೇಂದ್ರದ 200 ಮೀ. ವ್ಯಾಪ್ತಿ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ತಿಳಿಸಿದರು.

  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಮಾತನಾಡಿ, ಅಬಕಾರಿ ಉಪನಿರೀಕ್ಷಕರ ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ಕೊಪ್ಪಳ ಜಿಲ್ಲೆಯ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ಗವಿಸಿದ್ದೇಶ್ವರ ಪಿಯು ಕಾಲೇಜು,
ಗವಿಸಿದ್ದೇಶ್ವರ ಮಹಾವಿದ್ಯಾಲಯ,
ಬಾಲಕರ ಸರ್ಕಾರಿ ಪ.ಪೂ. ಕಾಲೇಜು,
ಎಸ್.ಎಫ್.ಎಸ್. ಶಾಲೆ,
ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜು ಹಾಗೂ ನಿವೇಧಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿವೆ.  ಏ. 30 ರಂದು ಬೆಳಿಗ್ಗೆ 10 ರಿಂದ 11-30 ರವರೆಗೆ ವಿವರಣಾತ್ಮಕ ಪತ್ರಿಕೆ ಹಾಗೂ ಮಧ್ಯಾಹ್ನ 2 ರಿಂದ 3-30 ರವರೆಗೆ ವಸ್ತುನಿಷ್ಟ ಬಹು ಆಯ್ಕೆ ಮಾದರಿ ಪರೀಕ್ಷೆ ನಡೆಯಲಿದೆ. 

ಪರೀಕ್ಷೆ ಪ್ರಾರಂಭವಾದ 10 ನಿಮಿಷಗಳ ನಂತರ ಬರುವ ಅಂದರೆ ವಿಳಂಬವಾಗಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿಲ್ಲ.  ಪರೀಕ್ಷಾ ಅವಧಿ ಮುಗಿಯುವವರೆಗೂ, ಯಾವುದೇ ಅಭ್ಯರ್ಥಿ ಪರೀಕ್ಷಾ ಕೇಂದ್ರದಿಂದ ಹೊರಗೆ ಬರುವಂತಿಲ್ಲ ಎಂದರು.