Wikipedia

Search results

Thursday, June 09, 2016

ಕಣ್ಣೀರನ್ನು ಕಾಣದ ನಗೆ:~
(ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ ಓದಿ)

ನಾನು ಬಹಳ ವರ್ಷಗಳ ಹಿಂದೆ ಒಂದು ಕಾದಂಬರಿ ಓದಿದ್ದೆ.
ಬಹುಶ: ಅದೊಂದು ರಷ್ಯಾದ ಕಾದಂಬರಿ ಇದ್ದಿರಬೇಕು.
ನನಗೆ ಕಾದಂಬರಿಯ ಹೆಸರು, ಲೇಖಕರ ಹೆಸರು ಮರೆತು ಹೋಗಿದ್ದರೂ
ಆ ಕಥೆಯ ಸಾರಾಂಶ ಮನದಲ್ಲಿ ಅಚ್ಚಳಿಯದೇ ನಿಂತು ಬಿಟ್ಟಿದೆ.

ಅದನ್ನು ಓದಿದ ಕೆಲವು ದಿನಗಳೇಕೆ,
ಕೆಲ ತಿಂಗಳುಗಳವರೆಗೆ ಅದು ನನ್ನನ್ನು ಚೆನ್ನಾಗಿ ಅಲುಗಾಡಿಸಿಬಿಟ್ಟಿತ್ತು,
ಮನದಲ್ಲಿ ಭಯ ಹುಟ್ಟಿಸಿತ್ತು.!!!

ಒಂದು ಊರಿನ ಹೊರಗಡೆ ಒಂದು ಸಂಸಾರ ವಾಸವಾಗಿತ್ತು.
ಅವರ ಮನೆಯ ಪಕ್ಕದಲ್ಲೇ ಸ್ಮಶಾನ.
ಈ ಮನೆಯಲ್ಲಿದ್ದವರು ಮೂವರೇ ಜನ. ತಂದೆ, ತಾಯಿ ಮತ್ತು ಪುಟ್ಟ ಮಗಳು. ಅವಳಿಗೆ ಸುಮಾರು ಆರು ವರ್ಷ ವಯಸ್ಸು. ಮನೆಯಲ್ಲಿ ಕಡು ಬಡತನ. ಮನೆಯೊಳಗೆ ತಿನ್ನಲು ಆಹಾರವಿಲ್ಲ. ಹೊರಗಡೆ ತಿರುಗಾಡುವುದು ಸಾಧ್ಯವಿಲ್ಲದಷ್ಟು ಹಿಮಪಾತ.
ಅಪ್ಪನ ಕೆಲಸವೇ ವಿಚಿತ್ರ.
ಸ್ಮಶಾನಕ್ಕೆ ಯಾವುದಾದರೂ ಹೆಣ ಬಂದರೆ ಮಾತ್ರ ಅವನ ಕೆಲಸ ಪ್ರಾರಂಭ. ಆತ ಮಾಡುವುದು ಹೆಣದ ಅಲಂಕಾರ.
ಆ ದೇಶಗಳಲ್ಲಿ ಹೆಣವನ್ನು ಚೆನ್ನಾಗಿ ಅಲಂಕಾರ ಮಾಡಿ, ಮರದ ಪೆಟ್ಟಿಗೆಯೊಳಗಿರಿಸಿ ನಂತರ ನೆಲದಲ್ಲಿ ಹೂಳುತ್ತಾರೆ.

ಈತ ಹೆಣದ ಅಲಂಕಾರದಲ್ಲಿ ಪರಿಣಿತ. ಅದಕ್ಕೇ ಜನ ಮೃತದೇಹಗಳನ್ನು ಅಲ್ಲಿಗೆ ತಂದು ಒಪ್ಪಿಸುತ್ತಿದ್ದರು.
ಈತ ಹೆಣವನ್ನು ಶುದ್ಧವಾಗಿ ತೊಳೆದು, ಮುಲಾಮು ಸವರಿ ನಂತರ ಅವುಗಳಿಗೆ ಒಳ್ಳೆಯ ಪೋಷಾಕು ತೊಡಿಸುತ್ತಿದ್ದ.
ಮುಖಕ್ಕೆ ವಿಶೇಷವಾದ ಅಲಂಕಾರ ಮಾಡಿ ದೇಹವನ್ನು ಮತ್ತಷ್ಟು ಅಲಂಕಾರ ಮಾಡಿದ ಮರದ ಪೆಟ್ಟಿಗೆಯಲ್ಲಿಟ್ಟು ಸಂಬಂಧಿಕರಿಗೆ ಒಪ್ಪಿಸುತ್ತಿದ್ದ.
ಈ ಕೆಲಸಕ್ಕೆ ಅವನಿಗೆ ಸುಮಾರು ಮೂರರಿಂದ ನಾಲ್ಕು ತಾಸು ಸಮಯ ತಗಲುತ್ತಿತ್ತು. ಅದಕ್ಕಾಗಿ ಅವನಿಗೆ ಒಂದಷ್ಟು ಹಣ ದೊರಕುತ್ತಿತ್ತು. ಅದರಿಂದ ಕೆಲವು ದಿನ ಜೀವನ ಸಾಗುತ್ತಿತ್ತು.

ಹೆಣಗಳು ಬಾರದಿದ್ದ ದಿನ ಬದುಕು ದುರ್ಭರವಾಗುತ್ತಿತ್ತು.
ಮೂವರೂ ಅದೇ ಹಳತಾದ ಬ್ರೆಡ್ ಮತ್ತು ನೀರಿನಂತಹ ಸಾರಿನ ಮೇಲೆಯೇ ಬದುಕುತ್ತಿದ್ದರು.

ಈ ಹುಡುಗಿಗೆ ಅರ್ಥವಾಗಿತ್ತು,
ಹೆಣಗಳು ಬಂದರೆ ಮಾತ್ರ ಮನೆಯಲ್ಲಿ ಒಳ್ಳೆಯ ಊಟ ಎಂದು.
ಆಕೆ ಮನೆಯ ಮುಂದೆ ಹೆಣಗಳಿಗಾಗಿ ದಿನಾಲು ಕಾಯ್ದು ನಿಲ್ಲುತ್ತಿದ್ದಳು. ಯಾವುದಾದರೂ ಹೆಣವನ್ನು ಜನ ತಂದರೆ ಅವಳ ಮುಖ ಅರಳುತ್ತಿತ್ತು.
ಹೆಣದ ಹಿಂದಿದ್ದ ಜನರ ದು:ಖ ಅವಳ ಗಮನಕ್ಕೇ ಬರುತ್ತಿರಲಿಲ್ಲ. ಪ್ರತಿ ಬಾರಿ ದೇಹವೊಂದು ಮನೆಯ ಹತ್ತಿರ ಬಂದಾಗ ಅವಳ ಮುಖದಲ್ಲಿ ವಿಚಿತ್ರವಾದ ಸಂತೋಷದ ಛಾಯೆ ಮೂಡುತ್ತಿತ್ತು.

ಒಂದು ದಿನ ಹುಡುಗಿ ಮನೆಯ ಮುಂದೆ ನಿಂತಿದ್ದಾಳೆ. ದೂರದಲ್ಲಿ ಯಾರೋ ದೇಹವನ್ನು ತೆಗೆದುಕೊಂಡು ಬರುತ್ತಿದ್ದ ದೃಶ್ಯ ಕಾಣಿಸಿತು.
ಅವಳ ಮುಖದ ಮೇಲೆ ನಗೆ ತೇಲಿತು. ತಕ್ಷಣ ಅವಳಿಗೆ ನೆನಪಾಯಿತು, ಅಪ್ಪ ಮನೆಯಲ್ಲಿಲ್ಲ. ಓಡಿ ಹೋಗಿ ಅಮ್ಮನಿಗೆ ಹೆಣ ಬರುತ್ತಿರುವ ಶುಭಸುದ್ದಿ ತಿಳಿಸಿದಳು.
ಅಮ್ಮ ಹೇಳಿದರು, ಬರಲಿಬಿಡು, ನಿನ್ನ ತಂದೆ ಸ್ವಲ್ಪ ಹೊತ್ತಿನಲ್ಲೇ ಬರುತ್ತಾರೆ.

ಜನ ತಂದು ಹೆಣವನ್ನು ಮನೆಯ ಮುಂದೆ ಇಳಿಸಿದರು. ಹುಡುಗಿ ಸಂತೋಷದಿಂದ ಓಡಿಬಂದು ನೋಡಿದರೆ ಅದು ತನ್ನ ತಂದೆಯದೇ ದೇಹ.
ಹುಡುಗಿಯ ಮುಖದ ಮೇಲಿನ ನಗೆ ಮಾಯವಾಗಿ ದು:ಖ ಒತ್ತರಿಸಿ ಬಂದಿತು. ಮೊದಲ ಬಾರಿಗೆ ಹೆಣದ ದೃಶ್ಯ ಆಕೆಗೆ ದು:ಖ ತಂದಿತು.

ಈ ಕಥೆ ನನ್ನ ಮೇಲೆ ಬಹಳ ಪರಿಣಾಮ ಬೀರಿತು. ಮತ್ತೊಬ್ಬರ ದು:ಖಗಳಿಗೆ ಸ್ಪಂದಿಸದೇ ತಮ್ಮ ವೈಯಕ್ತಿಕ ಲಾಭಗಳಿಗಾಗಿ ಜನರನ್ನು ಸುಲಿಯುವ ಭ್ರಷ್ಟ ಜನರು ಕೂಡ ಇದೇ ವರ್ಗಕ್ಕೆ ಸೇರುವಂಥವರು.

ಆ ಹುಡುಗಿ ಹೇಗೆ ಹೆಣದ ಹಿಂದಿದ್ದ ಜನರ ದು:ಖವನ್ನು ಕಾಣದೇ ತನ್ನ ತಂದೆಗೆ ಬರಬಹುದಾದ ಹಣವನ್ನು ಮಾತ್ರ ಅಪೇಕ್ಷಿಸಿ ಸಂತೋಷ ಪಡುತ್ತಿದ್ದಳೋ ಅದೇ ರೀತಿ ಜನರ ಕಷ್ಟಗಳ, ಕಣ್ಣೀರನ್ನು ಕಾಣದೇ ಜನರನ್ನು, ರಾಜ್ಯವನ್ನು ದೇಶವನ್ನು ಲೂಟಿ ಮಾಡುವ ಭ್ರಷ್ಟರು ಒಂದು ದಿನ ಆ ಹುಡುಗಿ ಎದುರಿಸಿದಂಥ ಆಘಾತವನ್ನು ಎದುರಿಸಲೇಬೇಕೆಂಬುದು ಸತ್ಯ.

ವೈಯಕ್ತಿಕ ಲಾಭಕ್ಕಾಗಿ ಪರರ ಕಣ್ಣೀರು ಕಾಣದ ಜನರಿಗೆ ಈ ಶಾಶ್ವತ ಸತ್ಯ ಮೊದಲೇ ಅರ್ಥವಾದರೆ ಎಷ್ಟು ಒಳ್ಳೆಯದಲ್ಲವೇ?

ಸ್ನೇಹಿತರೆ ಆದಷ್ಟು ಒಳ್ಳೆಯ ಚಿಂತನೆಗಳನ್ನು ಮಾಡೋಣ ಸಾರ್ಥಕ ಜೀವನ ನಡೆಸೋಣ.

ಯೋಚಿಸಿ ಯೋಜಿಸಿ

ಏನಂತೀರಿ ?